"ನಿಮ್ಮನ್ನು ಸಂಸದರಾಗಿ ಮಾಡಿದ್ದು ನಮ್ಮ ದುರಂತ "
ಸಂಸದ ಪ್ರತಾಪ್ ಸಿಂಹ ಗೆ ಕೊಡಗಿನ ಬಿಜೆಪಿ ಮುಖಂಡರೊಬ್ಬರಿಂದ ಕ್ಲಾಸ್
ಮಡಿಕೇರಿ, ಸೆ.13:" ನಿಮ್ಮನ್ನು ಸಂಸದರಾಗಿ ಮಾಡಿದ್ದು ನಮ್ಮ ದುರಂತ. ನಿಮ್ಮಂತವರಿಂದ ನಮ್ಮ ಪಕ್ಷ ಉದ್ದಾರವಾಗುವುದಿಲ್ಲ "ಎಂದು ಸಂಸದ ಪ್ರತಾಪ್ ಸಿಂಹ ಅವರಿಗೆ ಕೊಡಗಿನ ಬಿಜೆಪಿಯ ಮುಖಂಡರೊಬ್ಬರು ಕ್ಲಾಸ್ ತೆಗೆದುಕೊಂಡ ಘಟನೆ ವರದಿಯಾಗಿದೆ.
ಕೊಡಗಿನಲ್ಲಿ ಇತ್ತೀಚೆಗೆ ಪ್ರಾಕೃತಿಕ ವಿಕೋಪದಿಂದ ಆಗಿರುವ ಹಾನಿಯ ಬಗ್ಗೆ ಕೇಂದ್ರದ ಹಿರಿಯ ಅಧಿಕಾರಿಗಳ ತಂಡ ಜಿಲ್ಲೆಯ ವಿವಿಧೆಡೆಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಸಂಸದ ಪ್ರತಾಪ್ ಸಿಂಹ ತಪ್ಪು ಮಾಹಿತಿ ನೀಡಿದ್ದಾರೆಂಬ ಆರೋಪದಲ್ಲಿ ಬಿಜೆಪಿಯ ಹಿರಿಯ ಮುಖಂಡ ಎಂ.ಬಿ.ದೇವಯ್ಯ ಅವರು ಸಂಸದ ಪ್ರತಾಪ್ ಸಿಂಹರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಜನಪ್ರತಿನಿಧಿಗಳಾಗಿರುವ ನೀವು ಜನಪ್ರತಿನಿಧಿಯಂತೆ ವರ್ತಿಸಬೇಕು. ಅದು ಬಿಟ್ಟು ಜನವಿರೋಧಿಯಾಗಿ ವರ್ತಿಸಬೇಡಿ ಎಂದು ಎಚ್ಚರಿಕೆ ನೀಡಿದರು.
ನೀವು ತಪ್ಪು ಮಾಹಿತಿ ನೀಡಬೇಡಿ. ಬೆಂದ ಗಾಯಕ್ಕೆ ಉಪ್ಪು ಹಾಕಬೇಡಿ ಎಂದು ಸಂಸದರಿಗೆ ಸಲಹೆ ನೀಡಿದ ಎಂಬಿ ದೇವಯ್ಯ “ ನನ್ನ ಮೇಲೆ ನೀವು ಏನು ಶಿಸ್ತಿನ ಕ್ರಮಕೈಗೊಳ್ಳುತ್ತಿರಾ ? ಅದನ್ನು ಮಾಡಿ .ನಾನು ಹೆದರೊಲ್ಲ ‘’ ಎಂದು ಗುಡುಗಿದರು.
ಬಿಜೆಪಿಯ ಹಿರಿಯ ನಾಯಕ ದೇವಯ್ಯರನ್ನು ಸಮಧಾನಪಡಿಸಲು ಪ್ರತಾಪ್ ಸಿಂಹ ಯತ್ನ ನಡೆಸಿದರು. ಆದರೆ ದೇವಯ್ಯ ಅವರು ಸಂಸದರ ಮಾತಿಗೆ ಸೊಪ್ಪು ಹಾಕಲಿಲ್ಲ ಎಂದು ತಿಳಿದು ಬಂದಿದೆ.