ಕುಶಾಲನಗರ: ಗಣಪತಿ ವಿಸರ್ಜನೆ ವೇಳೆ ನೀರಿನಲ್ಲಿ ಮುಳುಗಿ ಮೃತಪಟ್ಟ ಬಾಲಕ
ಕುಶಾಲನಗರ, ಸೆ13: ಗಣೇಶ ವಿಸರ್ಜನೆ ವೇಳೆ 13ರ ಹರೆಯದ ಬಾಲಕ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಸಮೀಪದ ಸಿದ್ಧಲಿಂಗಪುರದ ಅರಶಿನಕುಪ್ಪೆಯಲ್ಲಿ ನಡೆದಿದೆ.
ಹೇಮಂತ್ (13) ಮೃತ ಬಾಲಕ. ಸಿದ್ಧಲಿಂಗಪುರದ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಈತ ಸ್ಥಳೀಯರಾದ ಅನಂತಕುಮಾರ್ ಹಾಗೂ ಪದ್ಮ ದಂಪತಿಗಳ ಎರಡನೇ ಪುತ್ರನಾಗಿದ್ದು, ಇಂದು ಗಣಪತಿ ವಿಸರ್ಜನೆ ವೇಳೆ ನೀರು ಪಾಲಾಗಿದ್ದಾನೆ ಎನ್ನಲಾಗಿದೆ.
ಗುರುವಾರ ಮಧ್ಯಾಹ್ನದ ವೇಳೆ ಹನ್ನೆರಡು ಜನ ಬಾಲಕರ ತಂಡವು ಸಿದ್ಧಲಿಂಗಪುರದ ಬಿದಿರುಕಟ್ಟೆ ಕೆರೆಗೆ ಗಣೇಶ ವಿಸರ್ಜನೆಗೆಂದು ತೆರಳಿದ್ದು, ಈ ಸಂದರ್ಭ ಹೇಮಂತ್ ನೀರಿನಲ್ಲಿ ಮುಳುಗಿದ್ದು, ಈಜು ಬಾರದ ಕಾರಣ ಯಾರೂ ರಕ್ಷಣೆಗೆ ತೆರಳಲು ಮುಂದಾಗಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಮೃತ ಹೇಮಂತ್ ತನ್ನ ತಂದೆ ತಾಯಿ ಹಾಗೂ ಓರ್ವ ಸಹೋದರನನ್ನು ಅಗಲಿದ್ದಾನೆ.
ತೊರೆನೂರು ಗ್ರಾಮ ಪಂಚಾಯತ್ ಸದಸ್ಯ ರವಿ ಮಾತನಾಡಿ, ಇಂದು ಗಣೇಶ ವಿಸರ್ಜನೆ ವೇಳೆ ಒಬ್ಬ ಬಾಲಕ ನೀರು ಪಾಲಾಗಿದ್ದಾನೆ. ಈ ಘಟನೆಯಿಂದಾಗಿ ಬಹಳ ಬೇಸರವಾಗಿದೆ. ಈ ಘಟನೆಯ ಬಗ್ಗೆ ಪೋಷಕರು ಹಾಗೂ ಸಂಬಂಧಪಟ್ಟ ಇಲಾಖೆಯವರು ಎಚ್ಚೆತ್ತುಕೊಳ್ಳಬೇಕು ಎಂದರು.
ಈ ಬಗ್ಗೆ ಕುಶಾಲನಗರ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.