ಅಧಿಕಾರದ ಅವಕಾಶ ಬಂದಲ್ಲಿ ಬಿಜೆಪಿ ಕೈಕಟ್ಟಿ ಕೂರಲ್ಲ: ಶಾಸಕ ಸಿ.ಟಿ.ರವಿ
ಚಿಕ್ಕಮಗಳೂರು, ಸೆ.14: ರಾಜಕೀಯ ನಿಂತ ನೀರಲ್ಲ, ಅವಕಾಶ ಬಂದಾಗ ಬಿಜೆಪಿ ಪಕ್ಷ ಕೈಕಟ್ಟಿ ಕೂರುವುದಿಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ಹೇಳಿದರು.
ಸಮ್ಮಿಶ್ರ ಸರಕಾರದ ರಾಜಕೀಯ ಬೆಳವಣಿಗೆ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸರಕಾರ ರಚನೆಯಾಗಿರುವುದು ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಬೇಕು ಎಂಬ ಉದ್ದೇಶದಿಂದ. ಆದರೆ ಪ್ರಸಕ್ತ ಅವರಲ್ಲಿಯೇ ವಿರೋಧಗಳು, ಭಿನ್ನಾಭಿಪ್ರಾಯಗಳು ವ್ಯಕ್ತವಾಗಿದೆ ಎಂದು ಲೇವಡಿ ಮಾಡಿದರು.
ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಸಾರ್ವಜನಿಕವಾಗಿ ಪತ್ರ ಬರೆಯುತ್ತಾರೆ ಎಂದರೆ ಅವರ ನೋವು ಮತ್ತು ಆಕ್ರೋಶ ಏನು ಎಂಬುವುದು ತಿಳಿಯುತ್ತದೆ. ರಮೇಶ್ ಜಾರಕಿಹೊಳಿ ಮತ್ತು ಸತೀಶ್ ಜಾರಕಿಹೊಳಿ ಬಿಜೆಪಿಯವರಲ್ಲ. ಅವರು ಕಟ್ಟಾ ಕಾಂಗ್ರೆಸ್ ನವರು. ಕಾಂಗ್ರೆಸ್ ರಾಜಕಾರಣದಲ್ಲಿ ಡಿ.ಕೆ.ಶಿವಕುಮಾರ್ ಹಸ್ತಕ್ಷೇಪ ಅವರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಅವರ ಆಕ್ರೋಶ ಸ್ಪೋಟಗೊಂಡರೆ ಯಾವಾಗ ಬೇಕಾದರೂ ಸರಕಾರ ಬಿಳುತ್ತದೆ ಎಂದು ಭವಿಷ್ಯ ನುಡಿದರು.
ರಾಜ್ಯದಲ್ಲಿ ಮೈತ್ರಿ ಸರಕಾರ ರಚನೆಯಾದ ದಿನದಿಂದಲೂ ಸಾರ್ವಜನಿಕರು, ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರಲ್ಲಿಯೇ ಅಸಮಧಾನವಿದೆ. ಅಸಮಾಧಾನ ಸರಿಪಡಿಸುವುದು ಕಾಂಗ್ರೆಸ್, ಜೆಡಿಎಸ್ ಸರಕಾರದ ಕೆಲಸ. ಅದೇನು ನಮ್ಮ ಕೆಲಸವೇ ಎಂದು ಪ್ರಶ್ನಿಸಿದರು.
ಯಾವ ಸರಕಾರಕ್ಕೆ ಸೈದ್ಧ್ದಾಂತಿಕ ಬದ್ದತೆ ಇರುತ್ತದೋ ಆ ಸರಕಾರ ಉಳಿಯುತ್ತದೆ. ರಾಜ್ಯದ ಸಮ್ಮಿಶ್ರ ಸರಕಾರಕ್ಕೆ ಸೈದ್ಧಾಂತಿಕ ಬದ್ಧತೆಯೂ ಇಲ್ಲ, ಜನರ ಬಗ್ಗೆ ಕಾಳಜಿಯೂ ಇಲ್ಲ. ಹಾಗಾಗೀ ರಾಜ್ಯ ಸರಕಾರ ಸಮಸ್ಯೆಯ ಸುಳಿಯಲ್ಲಿ ಸಿಲುಕಿದೆ ಎಂದ ಅವರು, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಅವರು, ಸಿದ್ದರಾಮಯ್ಯ ಅವರನ್ನು ಕುರಿತು ಇಂತಹ ಕೆಟ್ಟ ಸಿ.ಎಂ. ಜೀವನದಲ್ಲಿಯೇ ನೋಡಿಲ್ಲ, ಎಂಥ ಕೆಟ್ಟ ವ್ಯಕ್ತಿಯನ್ನು ಬೆಳೆಸಿದೆ ಎಂದು ಪಶ್ವತಾಪ ಪಡುತ್ತಿದ್ದೇನೆ ಎಂದು ಹೇಳಿದ್ದರು. ಆನಂತರ ಅವರು ಯಾರ ಜೊತೆ ಸೇರಿದರು ಎಂದರು ಪ್ರಶ್ನಿಸಿದ ರವಿ, ಸರಕಾರಕ್ಕೆ ಸಮಾಜಿಕ ನ್ಯಾಯದ ಕಾಳಜಿ ಇಲ್ಲ. ಇದು ಪ್ರಜಾಪ್ರಭುತ್ವಕ್ಕೆ ಪೂರಕವಾದ ಸರಕಾರವಲ್ಲ. ಈ ಸರಕಾರ ಬಹಳ ದಿನ ಉಳಿಯುವುದಿಲ್ಲ ಎಂದು ನುಡಿದರು.