20 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ
ಬೆಂಗಳೂರು, ಸೆ.15: ರಾಜ್ಯ ಸರಕಾರವು ಕಾನೂನು, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಮಾಡಿದ್ದು, ಬೆಳಗಾವಿ ಉತ್ತರ ವಲಯ ಐಜಿಪಿ ಅಲೋಕ್ ಕುಮಾರ್, ಭ್ರಷ್ಟಾಚಾರ ನಿಗ್ರಹ ದಳದ ಎಡಿಜಿಪಿ ಅಲೋಕ್ ಮೋಹನ್ ಸೇರಿದಂತೆ 20 ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಶನಿವಾರ ಆದೇಶ ಹೊರಡಿಸಿದೆ.
ಭ್ರಷ್ಟಾಚಾರ ನಿಗ್ರಹ ದಳದ ಎಡಿಜಿಪಿ ಅಲೋಕ್ ಮೋಹನ್ರನ್ನು ಬೆಂಗಳೂರು ರೈಲ್ವೆ ವಿಭಾಗದ ಎಡಿಜಿಪಿ, ಹುದ್ದೆಯ ನಿರೀಕ್ಷೆಯಲ್ಲಿದ್ದ ಎಡಿಜಿಪಿ ಪಿ.ಎಸ್.ಸಂಧುರನ್ನು ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಆಯುಕ್ತರನ್ನಾಗಿ ವರ್ಗಾವಣೆ ಮಾಡಲಾಗಿದೆ.
ಬೆಂಗಳೂರು ಪೊಲೀಸ್ ಕಂಪ್ಯೂಟರ್ ವಿಭಾಗದ ಎಡಿಜಿಪಿ ಡಾ.ಪಿ.ರವೀಂದ್ರನಾಥ್ರನ್ನು ಬೆಂಗಳೂರು ಅರಣ್ಯ ವಿಭಾಗದ ಎಡಿಜಿಪಿ, ರಾಜ್ಯ ಲೋಕಾಯುಕ್ತ ಎಡಿಜಿಪಿ ಸಂಜಯ್ ಸಹಾಯ್ರನ್ನು ಬೆಂಗಳೂರು ಪೊಲೀಸ್ ಕಂಪ್ಯೂಟರ್ ವಿಭಾಗದ ಎಡಿಜಿಪಿಯನ್ನಾಗಿ ವರ್ಗಾವಣೆ ಮಾಡಲಾಗಿದೆ.
ಬೆಂಗಳೂರು ಅರಣ್ಯ ವಿಭಾಗದ ಎಡಿಜಿಪಿ ಡಾ.ಅಲಿಕನಾ ಎಸ್.ಮೂರ್ತಿಯನ್ನು ರಾಜ್ಯ ಲೋಕಾಯುಕ್ತ ಎಡಿಜಿಪಿ, ಬೆಳಗಾವಿ ಉತ್ತರ ವಲಯದ ಐಜಿಪಿ ಅಲೋಕ್ ಕುಮಾರ್ರನ್ನು ಬೆಂಗಳೂರು ನಗರ ಅಪರಾಧ ವಿಭಾಗದ ಐಜಿಪಿ ಹಾಗೂ ಹೆಚ್ಚುವರಿ ಆಯುಕ್ತರನ್ನಾಗಿ ವರ್ಗಾವಣೆ ಮಾಡಲಾಗಿದೆ.
ಬೆಂಗಳೂರು ನಗರದ ಡಿಐಜಿ ಹಾಗೂ ಜಂಟಿ ಪೊಲೀಸ್ ಆಯುಕ್ತ(ಅಪರಾಧ) ಎನ್.ಸತೀಶ್ ಕುಮಾರ್ರನ್ನು ರಾಜ್ಯ ಮೀಸಲು ಪೊಲೀಸ್ ವಿಭಾಗದ ಡಿಐಜಿ, ಬೆಂಗಳೂರು ಗುಪ್ತಚರ ವಿಭಾಗದ ಡಿಐಜಿಪಿ ಸಂದೀಪ್ ಪಾಟೀಲ್ರನ್ನು ಬೆಂಗಳೂರು ನಗರದ ಕೇಂದ್ರ ಸಶಸ್ತ್ರ ಮೀಸಲು ಪಡೆಯ ಡಿಐಜಿ ಹಾಗೂ ಜಂಟಿ ಆಯುಕ್ತರನ್ನಾಗಿ ವರ್ಗಾವಣೆ ಮಾಡಲಾಗಿದೆ.
ಹುದ್ದೆಯ ನಿರೀಕ್ಷೆಯಲ್ಲಿದ್ದ ಡಿಐಜಿಪಿ ಡಾ.ಪಿ.ಎಸ್.ಹರ್ಷರನ್ನು ಬೆಂಗಳೂರು ಕಾರಾಗೃಹದ ಡಿಐಜಿಪಿ, ಕೆ.ಟಿ.ಬಾಲಕೃಷ್ಣರನ್ನು ಬೆಂಗಳೂರು ನಗರದ ಗುಪ್ತಚರ(ಆಡಳಿತ) ವಿಭಾಗದ ಪೊಲೀಸ್ ವರಿಷ್ಟಾಧಿಕಾರಿ, ಪಿ.ರಾಜೇಂದ್ರ ಪ್ರಸಾದ್ರನ್ನು ಬೆಂಗಳೂರು ಪೊಲೀಸ್ ವರಿಷ್ಟಾಧಿಕಾರಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
ಡಿಸಿಪಿ(ಅಪರಾಧ) ಡಾ.ರಾಮ್ನಿವಾಸ್ ಸೆಪಟ್ರನ್ನು ಭ್ರಷ್ಟಾಚಾರ ನಿಗ್ರಹ ದಳ ವಿಭಾಗದ ಪೊಲೀಸ್ ವರಿಷ್ಟಾಧಿಕಾರಿ, ಯಾದಗಿರಿ ಜಿಲ್ಲೆಯ ಪೊಲೀಸ್ ಇದಾ ಮಾರ್ಟಿನ್ ಮರ್ಬಾನಿಯಂಗ್ರನ್ನು ಬೆಂಗಳೂರು ನಗರದ ಸಂಚಾರಿ ಪಶ್ಚಿಮ ವಿಭಾಗದ ಡಿಸಿಪಿಯನ್ನಾಗಿ ವರ್ಗಾವಣೆ ಮಾಡಲಾಗಿದೆ.
ಹುದ್ದೆಯ ನಿರೀಕ್ಷೆಯಲ್ಲಿದ್ದ ಡಾ.ಭೀಮಾಶಂಕರ್ ಎಸ್.ಗುಳೇದ್ರನ್ನು ಬೆಂಗಳೂರು ರೈಲ್ವೆ ವಿಭಾಗದ ಎಸ್ಪಿ, ಬೆಂಗಳೂರು ಡಿಜಿಪಿ ಕಚೇರಿಯ ಎಐಜಿಪಿ(ಸಾಮಾನ್ಯ), ಮಂಗಳೂರು ನಗರದ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಹನುಮಂತರಾಯರನ್ನು ಯಾದಗಿರಿ ಜಿಲ್ಲೆಯ ಪೊಲೀಸ್ ವರಿಷ್ಟಾಧಿಕಾರಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
ಭ್ರಷ್ಟಾಚಾರ ನಿಗ್ರಹ ದಳದ ಎಸ್ಪಿ ಎಸ್.ಗಿರೀಶ್ರನ್ನು ಬೆಂಗಳೂರು ನಗರದ ಡಿಸಿಪಿ(ಅಪರಾಧ), ಬಿಎಂಟಿಸಿ ಭದ್ರತೆ ಹಾಗೂ ವಿಚಕ್ಷಣ ದಳದ ಎಸ್ಪಿ ಹಾಗೂ ನಿರ್ದೇಶಕ ಡಾ.ಎ.ಎನ್.ಪ್ರಕಾಶ್ಗೌಡರನ್ನು ಹಾಸನ ಜಿಲ್ಲೆಯ ಪೊಲೀಸ್ ವರಿಷ್ಟಾಧಿಕಾರಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
ಬಿಡಿಎ ವಿಶೇಷ ಕಾರ್ಯಪಡೆ ಹಾಗೂ ವಿಚಕ್ಷಣದಳದ ಎಸ್ಪಿ ಕೆ.ವಿ.ಜಗದೀಶ್ರನ್ನು ಬೆಂಗಳೂರು ನಗರ ಸಂಚಾರ ಪೂರ್ವ ವಿಭಾಗದ ಡಿಸಿಪಿ, ಬೆಂಗಳೂರು ರೈಲ್ವೆ ವಿಭಾಗದ ಎಸ್ಪಿ ಎನ್.ಚೈತ್ರಾರನ್ನು ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಎಸ್ಪಿಯನ್ನಾಗಿ ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ.
ಐಎಎಸ್: ಚಾಮರಾಜನಗರ ಜಿಲ್ಲೆಯ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿಯನ್ನು ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ಹುದ್ದೆಯ ಸಮವರ್ತಿತ ಪ್ರಭಾರದಿಂದ ಬಿಡುಗಡೆಗೊಳಿಸಿ, ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ಮಹಾನಿರ್ದೇಶಕ ಕಪಿಲ್ ಮೋಹನ್ರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ಹುದ್ದೆಯ ಸಮವರ್ತಿತ ಪ್ರಭಾರದಲ್ಲಿ ನೇಮಿಸಲಾಗಿದೆ.