ರಾಜ್ಯದ ಕಾಲೇಜುಗಳ ಅಭಿವೃಧ್ಧಿಗೆ 600 ಕೋಟಿ ಬಿಡುಗಡೆ: ಸಚಿವ ಜಿ.ಟಿ.ದೇವೇಗೌಡ
ಮೈಸೂರು,ಸೆ.17: ರಾಜ್ಯದ ಕಾಲೇಜುಗಳ ಅಭಿವೃದ್ಧಿಗೆ 600 ಕೋಟಿ ರೂ. ಬಿಡುಗಡೆಯಾಗಿದೆ. ಮುಂದಿನ ದಿನಗಳಲ್ಲಿ ಕಾಮಗಾರಿಗಳ ಟೆಂಡರ್ ಕರೆಯಲಾವುದು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ತಿಳಿಸಿದರು.
ನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಲೇಜುಗಳ ಅಭಿವೃದ್ಧಿಯೇ ನಮ್ಮ ಸರ್ಕಾರದ ಉದ್ದೇಶವಾಗಿದೆ. ಯಾವುದೇ ದೋಷ ಇಲ್ಲದೆ ಎಲ್ಲಾ ಕಾಲೇಜುಗಳನ್ನು ಅಭಿವೃದ್ಧಿ ಮಾಡಲಾಗುವುದು. ಕಾಲೇಜುಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಯಾವುದೇ ಹಣ ಬಿಡುಗಡೆಯಾಗಿಲ್ಲ. ಖಾಲಿ ಇರುವ ವಿಶ್ವವಿದ್ಯಾನಿಲಯಗಳಿಗೆ ಖಾಯಂ ಕುಲಪತಿಗಳನ್ನು ಸದ್ಯದಲ್ಲೇ ನೇಮಿಸಲಾಗುವುದು ಎಂದರು.
ರಾಜ್ಯದಲ್ಲಿ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲು ಆಪರೇಷನ್ ಕಮಲ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ನನ್ನನ್ನು ಯಾರೂ ಟಚ್ ಮಾಡಿಲ್ಲ. ನಾನು ಯಾರನ್ನೂ ಟಚ್ ಮಾಡಿಲ್ಲ. ಯಾವ ಬಿಜೆಪಿ ನಾಯಕರು ನನ್ನ ಸಂಪರ್ಕದಲ್ಲಿ ಇಲ್ಲ. ಯಾವುದೇ ಗೊಂದಲಗಳಿಲ್ಲ. ಜಾರಕಿಹೊಳಿ ಬ್ರದರ್ಸ್ ಮೈತ್ರಿ ಸರ್ಕಾರಕ್ಕೆ ಯಾವುದೇ ಕಂಟಕ ಇಲ್ಲ, ಐದು ವರ್ಷ ಪೂರೈಸುತ್ತೇವೆ ಎಂದಿದ್ದಾರೆ ಎಂದರು.
ನಮ್ಮ ಜತೆ 10 ಮಂದಿ ಬಿಜೆಪಿ ಶಾಸಕರಿದ್ದಾರೆ ಎಂದಿರುವ ಸಚಿವ ಸಾರಾ ಮಹೇಶ್ ಹೇಳಿಕೆಗೆ ಪ್ರತಿಕ್ರಿಯಿಸಿ, ಸಾರಾ ಮಹೇಶ್ ಸಂಪರ್ಕದಲ್ಲಿ 10 ಜನ ಬಿಜೆಪಿ ಶಾಸಕರು ಇರಬಹುದು. ಅದು ನನಗೆ ಗೊತ್ತಿಲ್ಲ. ಈಗಾಗಲೇ ಎಲ್ಲರೂ ಸ್ಪಷ್ಟಪಡಿಸಿದ್ದಾರೆ. ನಾವೆಲ್ಲ ಒಟ್ಟಾಗಿದ್ದೇವೆ. ಸಿಎಂ ಕುಮಾರಸ್ವಾಮಿ ಜನಪರ ಕೆಲಸ ಮಾಡುತಿದ್ದಾರೆ. ಈಗಾಗಲೇ ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಸದಲ್ಲಿದ್ದಾರೆ. ಅರ್ಧ ಗಂಟೆ ಸಮಯವನ್ನು ಸಹ ಕುಮಾರಸ್ವಾಮಿಯವರು ವ್ಯರ್ಥ ಮಾಡುತ್ತಿಲ್ಲ ಎಂದು ಹೇಳಿದರು.