ನಾಗಮಂಗಲ: ಜೇನು ದಾಳಿಗೆ ರೈತ ಸಾವು
ನಾಗಮಂಗಲ, ಸೆ.17: ತೆಂಗಿನ ಕಾಯಿ ಕೀಳಲು ಹೋದ ರೈತನೋರ್ವನ ಮೇಲೆ ಆಕಸ್ಮಿಕ ಜೇನು ದಾಳಿ ನಡೆದ ಪರಿಣಾಮ ಚಿಕಿತ್ಸೆ ಫಲಿಸದೆ ಸಾವನ್ನಪಿರುವ ಘಟನೆ ತಾಲೂಕಿನ ಹಾಲತಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ವೆಂಕಟೇಶ್(40) ಜೇನು ದಾಳಿಗೆ ಸಾವನ್ನಪ್ಪಿರುವ ರೈತ.
ರವಿವಾರ ಮಧ್ಯಾಹ್ನ ವೆಂಕಟೇಶ್ ತಮ್ಮ ತೆಂಗಿನ ತೋಟದಲ್ಲಿ ಕಾಯಿ ಕೀಳಲು ತೆಂಗಿನ ಮರವೇರಿದ್ದಾರೆ. ಮರದಲ್ಲಿ ಕಟ್ಟಿದ್ದ ಜೇನುಗೂಡು ರೈತನ ಅರಿವಿಗೆ ಬಂದಿಲ್ಲ ಎನ್ನಲಾಗಿದ್ದು, ಕಾಯಿ ಕೀಳಲು ಪ್ರಾರಂಬಿಸುತ್ತಿದ್ದಂತೆ ಜೇನು ನೊಣಗಳು ಆತನಮೇಲೆ ದಾಳಿ ಮಾಡಿವೆ. ತಕ್ಷಣವೇ ಮರದಿಂದ ಇಳಿದು ಹತ್ತಿರದಲ್ಲಿದ್ದ ಕಾಲುವೆ ನೀರಿನಲ್ಲಿ ಮುಳುಗಿ ಹುಳುಗಳಿಂದ ತಪ್ಪಿಸಿಕೊಂಡು ಪಟ್ಟಣದ ಜನರಲ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದಾರೆ. ಆದರೆ, ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ರೈತ ಸಾವನ್ನಪ್ಪಿದ್ದಾರೆ.
ಈ ಸಂಬಂಧ ಗ್ರಾಮಾಂತರ ಠಾಣೆ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story