ಮಳವಳ್ಳಿ: ಪತ್ನಿಯ ಹತ್ಯೆಗೆ ಯತ್ನಿಸಿ ನೇಣಿಗೆ ಶರಣಾದ ವ್ಯಕ್ತಿ
ಮಳವಳ್ಳಿ,ಸೆ.18: ವ್ಯಕ್ತಿಯೋರ್ವ ತನ್ನ ಪತ್ನಿಯ ತಲೆಗೆ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಲು ಯತ್ನಿಸಿ, ಬಳಿಕ ಭಯಗೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಳವಳ್ಳಿ ತಾಲೂಕಿನ ಗೌಡಗೆರೆ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.
ಗ್ರಾಮದ ಬಸಪ್ಪ(60) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಕಳೆದ ಒಂದು ತಿಂಗಳ ಹಿಂದೆ ಕೆಲಸ ಮಾಡಲು ಆಗುವುದಿಲ್ಲವೆಂದು ಪತ್ನಿ ಬಸಮ್ಮಣ್ಣಿಯನ್ನು ಕರೆದುಕೊಂಡು ಸ್ವಗ್ರಾಮಕ್ಕೆ ವಾಪಸಾಗಿದ್ದರು.
ಬಸಪ್ಪನ ಪತ್ನಿ ಮತ್ತೆ ಬೆಂಗಳೂರಿಗೆ ಹೋಗೋಣವೆಂದು ಒತ್ತಾಯಿಸುತ್ತಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ಗಂಡ ಹೆಂಡತಿ ನಡುವೆ ಗಲಾಟೆಯಾಗಿದ್ದು, ಜಗಳ ವಿಕೋಪಕ್ಕೆ ತಿರುಗಿ ಬಸಪ್ಪ ಮನೆಯ ಅಟ್ಟದಲ್ಲಿ ಇಟ್ಟಿದ್ದ ಸುತ್ತಿಗೆ ತೆಗೆದುಕೊಂಡು ಪತ್ನಿಯ ತಲೆಗೆ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವದಿಂದ ಕುಸಿದು ಬಿದ್ದು ನರಳಾಡುತ್ತಿದ್ದ ಬಸಮ್ಮಣ್ಣಿ ಅವರನ್ನು ಅಕ್ಕಪಕ್ಕದ ಮನೆಯವರು ಪಟ್ಟಣದ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿ ನಂತರ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ಕೋಪದಿಂದ ಆದ ಅನಾಹುತವನ್ನು ಅರಿತ ಬಸಪ್ಪ ಗ್ರಾಮದ ಹೊರವಲಯಕ್ಕೆ ತೆರಳಿ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.