ಕೊಡಗು ಮಳೆ ಹಾನಿ: ರೈತರ ಎಲ್ಲಾ ರೀತಿಯ ಸಾಲ ಮನ್ನಾಕ್ಕೆ ಡಿಸಿಸಿ ಬ್ಯಾಂಕ್ ಮಹಾಸಭೆ ಮನವಿ
ಮಡಿಕೇರಿ ಸೆ.18 : ಕೊಡಗು ಜಿಲ್ಲೆ ಅತಿವೃಷ್ಟಿಯಿಂದ ನಲುಗಿ ಹೋಗಿದ್ದು, ಬಹುತೇಕ ಎಲ್ಲಾ ಬೆಳೆಗಳು ನಾಶವಾಗಿವೆ. ಕೃಷಿಕರು ತಾವು ಪಡೆದ ಸಾಲವನ್ನು ಮರುಪಾವತಿ ಮಾಡಲಾಗದ ಪರಿಸ್ಥಿತಿಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಕೊಡಗು ಜಿಲ್ಲೆಯನ್ನು ಅತಿವೃಷ್ಟಿ ಪೀಡಿತ ಜಿಲ್ಲೆ ಎಂದು ಘೋಷಿಸಿ ರೈತರ ಎಲ್ಲಾ ರೀತಿಯ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು ಎನ್ನುವ ಅಭಿಪ್ರಾಯ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ನ ಮಹಾಸಭೆಯಲ್ಲಿ ಕೇಳಿ ಬಂತು.
ನಗರದ ಕೊಡವ ಸಮಾಜದಲ್ಲಿ ಬ್ಯಾಂಕ್ನ ಅಧ್ಯಕ್ಷ ಬಿ.ಡಿ.ಮಂಜುನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಹಾಮಳೆಯ ಅನಾಹುತ ಮತ್ತು ಕೃಷಿಕರ ಸಂಕಷ್ಟದ ಬಗ್ಗೆ ಚರ್ಚಿಸಲಾಯಿತು. ಸಭೆಯನ್ನುದ್ದೇಶಿಸಿ ಮಾತನಾಡಿದ ಬಿ.ಡಿ.ಮಂಜುನಾಥ್ ಕೊಡಗು ಜಿಲ್ಲೆಯಲ್ಲಿ ಈ ಬಾರಿ ಸಂಭವಿಸಿದ ಅತಿವೃಷ್ಟಿ ಹಾಗೂ ಪ್ರಕೃತಿ ವಿಕೋಪದಿಂದಾಗಿ ಹೆಚ್ಚಿನ ರೈತ ಸಹಕಾರಿಗಳು ಸಂಕಷ್ಟಕ್ಕೆ ಒಳಗಾಗಿದ್ದು, ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಾದವರಿಗೆ ನೆರವು ನೀಡುವ ನಿಟ್ಟಿನಲ್ಲಿ ಅಪೆಕ್ಸ್ ಬ್ಯಾಂಕ್ ರಾಜ್ಯದ ಎಲ್ಲಾ ಡಿಸಿಸಿ ಬ್ಯಾಂಕ್ಗಳಿಂದ ನೆರವನ್ನು ಕೋರಿದೆ. ಅದರಂತೆ ತಮ್ಮ ಬ್ಯಾಂಕ್ ಕೂಡಾ ಜಿಲ್ಲೆಯ ಜನತೆಗೆ ಸಾಧ್ಯವಾದಷ್ಟು ಮಟ್ಟಿಗೆ ನೆರವು ನೀಡಲು ಮುಂದಾಗಿದೆ. ಈ ತಿಂಗಳಾಂತ್ಯಕ್ಕೆ ಜಿಲ್ಲೆಯ ಎಲ್ಲಾ ಸಹಕಾರ ಸಂಘಗಳ ವಾರ್ಷಿಕ ಮಹಾಸಭೆ ಮುಕ್ತಾಯವಾಗಲಿದ್ದು, ಆ ಸಂಘಗಳು ನೀಡುವ ನೆರವನ್ನೂ ಕ್ರೋಢೀಕರಿಸಿಕೊಂಡು ಸಂತ್ರಸ್ತರಿಗೆ ನೆರವು ನೀಡಲಾಗುವುದು. ಆ ನಿಟ್ಟಿನಲ್ಲಿ ಈಗಾಗಲೇ ಸಹಕಾರ ಪ್ರಕೃತಿ ವಿಕೋಪ ಪರಿಹಾರ ನಿಧಿ-ಕೊಡಗು ಹೆಸರಿನಲ್ಲಿ ಖಾತೆಯನ್ನು ತೆರೆದಿದ್ದು, ಸಹಕಾರಿಗಳಿಂದ ನೆರವನ್ನು ಪಡೆದು ಸಹಕಾರಿ ರೈತರಿಗೆ ಶಾಶ್ವತ ಪರಿಹಾರ ಒದಗಿಸಲು ಕಾರ್ಯಪ್ರವೃತ್ತವಾಗಿರುವುದಾಗಿ ತಿಳಿಸಿದರು.
ಕೊಡಗು ಜಿಲ್ಲೆಯ ಕೃಷಿಕರ ಬೆನ್ನೆಲುಬಾಗಿರುವ ಪ್ರಸಕ್ತ ಸಾಲಿನಲ್ಲಿ ರೈತರಿಗೆ ಶೇ.3ರ ಬಡ್ಡಿ ದರದಲ್ಲಿ ಮಧ್ಯಮಾವಧಿ ಕೃಷಿ ಹಾಗೂ ಕೃಷಿ ಸಂಬಂಧಿ ಸಾಲಗಳ ವಿತರಣೆಗೆ ಬ್ಯಾಂಕ್ 100 ಕೋಟಿ ರೂ.ಗಳ ಗುರಿ ನಿಗಧಿಪಡಿಸಿದೆ ಎಂದರು.
ಬ್ಯಾಂಕ್ನ ಪ್ರಗತಿ ಮತ್ತು ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ನೀಡಿದ ಅವರು, ರಾಜ್ಯ ಸರಕಾರದ ರಿಯಾಯಿತಿ ಬಡ್ಡಿ ದರದ ಸಾಲ ಯೋಜನೆಯಡಿ ರೈತರಿಗೆ ಶೂನ್ಯ ಬಡ್ಡಿದರದ ಸಾಲ ಒಳಗೊಂಡಂತೆ ಅಲ್ಪಾವಧಿ ಬೆಳೆ ಸಾಲ ನೀಡುವ ಸಲುವಾಗಿ 617.88 ಕೋಟಿ ರೂ.ಗಳಷ್ಟು ಕ್ರಮಿಕ ಪತ್ತಿನ ಮಿತಿಯನ್ನು ಸಹಕಾರ ಸಂಘಗಳಿಗೆ ಮಂಜೂರಾತಿ ಮಾಡುವ ಮೂಲಕ ಬೆಳೆ ಸಾಲ ವಿತರಣೆಗೆ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಕೃಷಿಯೇತರ ಸಾಲ ನೀಡಿಕೆಗೆ 310 ಕೋಟಿ ರೂ. ನಿಗದಿಪಡಿಸಿದ್ದು, ಗುರಿ ಸಾಧನೆಗೆ ವಿವಿಧ ಸಾಲ ಯೋಜನೆಗಳನ್ನು ರೂಪಿಸಲಾಗಿದೆ. ಅಲ್ಲದೆ ಚಿನ್ನಾಭರಣಗಳ ಮೇಲೆ ಗರಿಷ್ಠ 10 ಲಕ್ಷಗಳವರೆಗೆ ಈಡಿನ ಸಾಲ ಮತ್ತು ಗರಿಷ್ಠ 5 ಲಕ್ಷ ವರೆಗಿನ ಚಿನ್ನಾಭರಣ ಓವರ್ ಡ್ರಾಫ್ಟ್ ಸಾಲ ನೀಡಲು ಕ್ರಮ ಕೈಗೊಳ್ಳಲಾಗಿದ್ದು, ಸಹಕಾರ ಸಂಘ ಹಾಗೂ ಸಹಕಾರ ಸಿಬ್ಬಂದಿಗಳಿಗೆ ಸಹಕಾರ ಅಧ್ಯಯನಕ್ಕಾಗಿ ಹಣಕಾಸು ಸೌಲಭ್ಯ ಒದಗಿಸಲು ಕಾರ್ಯಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು.
ಬ್ಯಾಂಕ್ 2021ರಲ್ಲಿ ಶತಮಾನೋತ್ಸವವನ್ನು ಆಚರಿಸಿಕೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಶತಮಾನೋತ್ಸವ ಭವನ ನಿರ್ಮಾಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಇದರೊಂದಿಗೆ ಬ್ಯಾಂಕ್ನ ಎಲ್ಲಾ ಶಾಖೆಗಳ ಹಳೆಯ ಕೌಂಟರ್ಗಳಲ್ಲಿ ಆಂತರಿಕ ವಿನ್ಯಾಸಗೊಳಿಸಿ ನವೀಕರಿಸಲಾಗುವುದು ಎಂದು ಎಂದ ಅವರು, ಈಗಾಗಲೇ 17 ಶಾಖೆಗಳು ಕಾರ್ಯ ನಿರ್ವಹಿಸುತ್ತಿದ್ದು, ಇನ್ನೂ ಹೆಚ್ಚುವರಿಯಾಗಿ ನಾಲ್ಕು ಶಾಖೆಗಳನ್ನು ತೆರೆಯುವ ಸಂಬಂಧ ಅನುಮತಿ ಕೋರಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಂಜುನಾಥ್ ಹೇಳಿದರು.
ಬ್ಯಾಂಕ್ನ ಉಪಾಧ್ಯಕ್ಷ ಕೆ.ಹರೀಶ್ಪೂವಯ್ಯ, ನಿರ್ದೇಶಕರಾದ ಕೆ.ಎಂ. ಸೋಮಯ್ಯ, ಹೊಟ್ಟೇಂಗಡ ಎಂ.ರಮೇಶ್, ಪ್ರಭಾರ ಪ್ರಧಾನ ವ್ಯವಸ್ಥಾಪಕ ನಟರಾಜ್ ಮತ್ತಿತರ ಪ್ರಮುಖರು ಸಭೆಯಲ್ಲಿ ಉಪಸ್ಥಿತರಿದ್ದರು.