ವ್ಯಾಪಾರ ಕ್ಷೇತ್ರದಲ್ಲಿ ಪೈಪೋಟಿ ಇದ್ದಲ್ಲಿ ಉದ್ಯಮ ಬೆಳೆಯುತ್ತದೆ: ಎಸ್.ಎಂ.ರಶೀದ್ ಹಾಜಿ
ಚಿಕ್ಕಮಗಳೂರು, ಸೆ.19: ವ್ಯಾಪಾರ ಕ್ಷೇತ್ರದಲ್ಲಿ ಪ್ರಬಲವಾದ ಪೈಪೋಟಿ ನೀಡುವ ಮೂಲಕ ಉದ್ಯಮಿಗಳು ಹೊಸ ಮುಖದ ವ್ಯಾಪಾರಸ್ಥರನ್ನು ಮಾರುಕಟ್ಟೆಗೆ ಪರಿಚಯಿಸಿ ಬಂಡವಾಳ ಹೂಡಲು ನೆರವಾಗಬೇಕೆಂದು ಬ್ಯಾರಿ ಚೇಂಬರ್ಸ್ ಆಫ್ ಕಾಮರ್ಸ್ ಮತ್ತು ಕಂಪೆನಿ ವ್ಯವಹಾರಗಳ ಸಮಿತಿ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ ತಿಳಿಸಿದರು.
ನಗರದ ಬ್ಲೂ ಮೌಂಟೆನ್ ವ್ಯಾಲಿ ರೆಸಾರ್ಟ್ನಲ್ಲಿ ಏರ್ಪಡಿಸಿದ್ದ ಚಿಕ್ಕಮಗಳೂರು, ಹಾಸನ ಮತ್ತು ದ.ಕ ಜಿಲ್ಲೆಯ ಬ್ಯಾರಿ ಉದ್ಯಮಿಗಳ ಚೇಂಬರ್ಸ್ ಸಭೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಮುಸ್ಲಿಂ ಜನಸಂಖ್ಯೆಯಲ್ಲಿ ಶೇ.90 ರಷ್ಟು ವ್ಯಾಪಾರಿಗಳಾಗಿದ್ದಾರೆ. ಉದ್ಯಮ ಕ್ಷೇತ್ರದಲ್ಲಿ ಹೆಚ್ಚಿನ ಬಂಡವಾಳದಲ್ಲಿ ತೊಡಗಲು ಮುಸ್ಲಿಮರಿಗೆ ಸಾಧ್ಯವಾಗಿದೆ. ಇನ್ನೂ ಅನೇಕ ಬ್ಯಾರಿ ವರ್ಗದವರು ವ್ಯಾಪಾರ ಕ್ಷೇತ್ರಕ್ಕೆ ಧುಮುಕಿಲ್ಲ. ಅಂತವರನ್ನು ಗುರುತಿಸಿ ವ್ಯಾಪಾರ ಕ್ಷೇತ್ರಕ್ಕೆ ಕರೆ ತರಲು ಚೇಂಬರ್ಸ್ ಪ್ರಯತ್ನ ನಡೆಸಿದೆ ಎಂದು ಹೇಳಿದರು.
ವ್ಯಾಪಾರ ಕ್ಷೇತ್ರದಲ್ಲಿ ಬಡ್ಡಿ ವ್ಯವಹಾರ ದೂರಾಗಬೇಕು. ಮೀನು ವ್ಯಾಪಾರ ದೇಶದ ಆದಾಯವನ್ನು ಹೆಚ್ಚಿಸಿದೆ. ಜಗತ್ತಿನ ಉದ್ದಗಲಕ್ಕೂ ಮೀನು ವ್ಯಾಪಾರಗಳು ಲಾಭದ ಮಟ್ಟದಲ್ಲೇ ಬೆಳೆದಿದೆ. ತಮ್ಮ ಚೇಂಬರ್ಸ್ ಮಂಗಳೂರು, ಚಿಕ್ಕಮಗಳೂರು, ಹಾಸನ, ಬೆಂಗಳೂರಿನಲ್ಲಿ ಘಟಕವವನ್ನು ಸ್ಥಾಪಿಸಿದೆ. ಸದ್ಯದಲ್ಲೇ ದುಬೈಯಲ್ಲಿ ಘಟಕವನ್ನು ಸ್ಥಾಪಿಸಲು ಚೇಂಬರ್ ನ ಪದಾಧಿಕಾರಿಗಳು ವಿದೇಶಕ್ಕೆ ಹೋಗಲಿದ್ದಾರೆ. ಬ್ಯಾರಿ ಸಮುದಾಯದವರು ಇರುವ ಎಲ್ಲಾ ಪ್ರದೇಶದಲ್ಲೂ ಚೇಂಬರ್ ಘಟಕ ಸ್ಥಾಪಿಸಿ, ಉದ್ಯಮ ಕ್ಷೇತ್ರವನ್ನು ಎತ್ತರಕ್ಕೆ ಕೊಂಡೊಯ್ಯವ ಪಣ ತೊಡಲಾಗಿದೆ ಎಂದರು.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಕೆ.ಮುಹಮ್ಮದ್ ಮಾತನಾಡಿದರು. ಮಂಗಳೂರಿನ ಉದ್ಯಮಿ ಮಹಮ್ಮದ್ ಇಂತಿಯಾಜ್, ಉದ್ಯಮ ಕ್ಷೇತ್ರದ ಪ್ರಗತಿ ಮತ್ತು ಏಳುಬೀಳುಗಳ ಪರಿಚಯ ಮಾಡಿಕೊಟ್ಟರು. ಜಿಲ್ಲಾ ಬ್ಯಾರಿಗಳ ಒಕ್ಕೂಟದ ಅಧ್ಯಕ್ಷ ಸಿ.ಕೆ.ಇಬ್ರಾಹಿಂ ಅಧ್ಯಕ್ಷತೆ ವಹಿಸಿದ್ದರು.
ಚೇಂಬರ್ಸ್ ಆಫ್ ಕಾಮರ್ಸ್ ಉದ್ಯಮಿಗಳಾದ ಅಬ್ದುಲ್ ರವೂಫ್ ಪುತ್ತಿಗೆ, ಮಹಮ್ಮದ್ ಶರೀಫ್, ಖಾಲೀದ್ ತಣ್ಣೀರುಬಾವಿ, ಬಿ.ಎ.ನಜೀರ್, ಮನ್ಸೂರ್ ಅಹಮ್ಮದ್, ಮಮ್ತಾಜ್ ಅಲಿ, ಶೌಕತ್, ಅಬ್ದುಲ್ ರಝಾಕ್, ಆಸಿಫ್, ಮಹಮ್ಮದ್, ಅಕ್ರಂ ಹಾಜಿ, ಬಿ.ಎಸ್.ಮಹಮ್ಮದ್, ನಾಸಿರ್ ಬಾಳೆಹೊನ್ನೂರು, ಎ.ಸಿ.ಅಯ್ಯೂಬ್ ಹಾಜಿ, ಕಿರುಗುಂದ ಅಬ್ಬಾಸ್, ಶರೀಫ್, ಬಿ.ಎಸ್.ನೂರ್ ಮಹಮ್ಮದ್, ಫಾರೂಕ್ ತರೀಕೆರೆ, ಇಬ್ರಾಹಿಂ ಆಲ್ದೂರು, ಕೌಸರ್ ಅಬ್ದುಲ್ ಹಾಜಿ, ಮಜೀದ್ ಚಕಮಕ್ಕಿ, ಬೇಲೂರಿನ ಉದ್ಯಮಿಗಳಾದ ಜಮಾಲ್, ಫಾರೂಕ್, ಬಸೀರ್, ಸಕಲೇಶಪುರ ಉದ್ಯಮಿಗಳಾದ ಇಬ್ರಾಹಿಂ ಯಾದ್ಗಾರ್, ಜಾಕೀರ್, ಅಕ್ಬರ್ ಮತ್ತಿತರರಿದ್ದರು.