ಹನೂರು ತಾಲೂಕನ್ನು ಬರ ಪೀಡಿತವೆಂದು ಘೋಷಿಸಲು ಒತ್ತಾಯ
ಹನೂರು,ಸೆ.21: ಹನೂರು ತಾಲೂಕು ಈ ವರ್ಷ ಸಂಪೂರ್ಣ ಬರಗಾಲದಿಂದ ತತ್ತರಿಸಿದ್ದು, ಇಲ್ಲಿನ ಜಾನುವಾರುಗಳಿಗೆ ಮೇವು ನೀರಿಲ್ಲದೆ ರೈತರ ಬದುಕು ತುಂಬಾ ದುಸ್ತರವಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಗಂಗಾದರ್ ತಿಳಿಸಿದರು.
ಪಟ್ಟಣದ ಖಾಸಗಿ ಕಟ್ಟಡದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ತಾಲೂಕು ಘಟಕ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆವತಿಯಿಂದ ಜಂಟಿ ಪ್ರತಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹನೂರು ತಾಲೂಕಿನಲ್ಲಿ ಸಕಾಲಕ್ಕೆ ಮಳೆ ಆಗದೆ ರೈತರು ತತ್ತರಿಸಿದ್ದಾರೆ. ಜಾನುವಾರುಗಳಿಗೆ ಮೇವು, ನೀರಿಲ್ಲದೆ ಹಳ್ಳಿಗಳಿಗೆ ಸಂಪೂರ್ಣ ಬರಗಾಲದ ಚಾಯೆ ಆವರಿಸಿದೆ. ಸಕಾಲಕ್ಕೆ ಮಳೆಯಾಗದೆ ಬೆಳೆದಿದ್ದ ಬೆಳೆಗಳು ಸಂಪೂರ್ಣ ಒಣಗುತ್ತಿವೆ. ಆದ್ದರಿಂದ ರಾಜ್ಯ ಸರ್ಕಾರವು ಹನೂರು ತಾಲೂಕನ್ನು ಸಹ ಬರಪೀಡಿತವೆಂದು ಘೋಷಿಸಿ, ರೈತರ ನೆರವಿಗೆ ನಿಂತು ಅಗತ್ಯ ಕ್ರಮಕೈಗೊಳ್ಳಬೇಕು ಎಂದರು.
ನಂತರ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಅಧ್ಯಕ್ಷ ವಿನೋದ್, ಹನೂರು ತಾಲೂಕು ಘೋಷಣೆಯಾಗಿದೆ. ಆದರೆ ಇದರ ಅಭಿವೃದ್ದಿಗೆ ಸರ್ಕಾರದ ಕಚೇರಿಗಳನ್ನು ಸ್ಥಾಪಿಸಿಲ್ಲ. ಕೂಡಲೇ ಸರ್ಕಾರದ ಕಚೇರಿಗಳನ್ನು ತೆರೆಯುವುದು ಮತ್ತು ಅದಕ್ಕೆ ಸೂಕ್ತ ಅಧಿಕಾರಿಗಳನ್ನು ನಿಯೋಜಿಸಬೇಕು ಎಂದರು.