ಸಾಹಸಿ ಸಮಾಜ ಸೇವಕ ಸುಂಟಿಕೊಪ್ಪ ಲತೀಫ್ ರಿಗೆ "ಕೊಡಗಿನ ರತ್ನ" ಗೌರವ
ಬೆಂಗಳೂರು, ಸೆ.23: ಕಳೆದ ತಿಂಗಳಲ್ಲಿ ಕೊಡಗು ಜಿಲ್ಲೆಯ ಹಲವೆಡೆಗಳಲ್ಲಿ ಭೂಕುಸಿತ, ನೆರೆ ಹಾಗೂ ಭೀಕರ ಪೃಕೃತಿ ದುರಂತಗಳು ಸಂಭವಿಸಿದಾಗ ಜೋಡಪಾಲ- ಮದೆನಾಡು ಪ್ರದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿದ್ದವರನ್ನು ಪ್ರಾಣದ ಹಂಗು ತೊರೆದು ರಕ್ಷಿಸಿದ್ದಲ್ಲದೆ, ಇದೀಗ ನೆರೆ ಸಂತ್ರಸ್ತರ ಪುನರ್ವಸತಿಗಾಗಿ ಒಂದು ಎಕರೆ ಜಾಗವನ್ನೂ ದಾನವಾಗಿ ನೀಡಿದ ಸಮಾಜ ಸೇವಕ, ಕೊಡಗು ಜಿಲ್ಲಾ ಪಂಚಾಯತ್ ಸದಸ್ಯ ಪಿ.ಎಂ.ಲತೀಫ್ ಸುಂಟಿಕೊಪ್ಪರಿಗೆ 'ಕೊಡಗಿನ ರತ್ನ' (Jewel of coorg) ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬೆಂಗಳೂರು ಬೆನ್ಸನ್ ಟೌನ್ ನಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಖಾಝಿ ಸೈಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ಅವರು ಲತೀಫ್ ಅವರಿಗೆ ಶಾಲು ಹೊದಿಸಿ ಅಭಿನಂದಿಸಿದರು. ರಾಜ್ಯ ಹಜ್ ಮತ್ತು ವಕ್ಫ್ ಸಚಿವ ಝಮೀರ್ ಅಹ್ಮದ್ ಪ್ರಶಸ್ತಿ ಫಲಕ ನೀಡಿದರು. ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಅಧ್ಯಕ್ಷ ಅಲ್ಹಾಜ್ ಪಿ.ಎಂ.ಅಬ್ಬಾಸ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ಕೇಂದ್ರ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ, ಕರ್ನಾಟಕ ಜಂಇಯ್ಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಮಾಣಿ ಉಸ್ತಾದ್, ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್, ಯೆನೆಪೊಯ ವಿವಿ ಕುಲಾಧಿಪತಿ ವೈ.ಅಬ್ದುಲ್ಲಾ ಕುಂಞಿ, ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಜಿ.ಎ.ಬಾವ, ವಕ್ಪ್ ಮಂಡಳಿಯ ಮಾಜಿ ನಿರ್ದೇಶಕ ಶಾಫಿ ಸಅದಿ ಬೆಂಗಳೂರು, ಸುನ್ನೀ ಕೋ ಅರ್ಡಿನೇಶನ್ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ನ, ಎಸ್.ವೈ.ಎಸ್. ನಾಯಕರಾದ ಯಾಕೂಬ್ ಯೂಸುಫ್ ಬೆಂಗಳೂರು, ಅಶ್ರಫ್ ಕಿನಾರ, ಹನೀಫ್ ಹಾಜಿ ಉಳ್ಳಾಲ, ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಇಸ್ಮಾಯೀಲ್ ಸಖಾಫಿ ಕೊಂಡಂಗೇರಿ, ಕೇರಳ ರಾಜ್ಯ ಎಸ್.ವೈ.ಎಸ್. ಉಪಾಧ್ಯಕ್ಷ ಪಳ್ಳಂಗೊಡ್ ಅಬ್ದುಲ್ ಖಾದರ್ ಮದನಿ, ಬೆಂಗಳೂರು ಜಿಲ್ಲಾ ಉಪಾಧ್ಯಕ್ಷ ಕೆ.ಎಚ್.ಇಸ್ಮಾಯೀಲ್ ಸಅದಿ ಕಿನ್ಯ, ದ.ಕ. ಜಿಲ್ಲಾ ಕಾಂಗ್ರೆಸ್ ಮೈನಾರಿಟಿ ಅಧ್ಯಕ್ಷ ಎನ್.ಎಸ್.ಕರೀಂ ಮಂಜನಾಡಿ, ಎಂ.ಬಿ.ಹಮೀದ್ ಮಡಿಕೇರಿ, ಹಬೀಬ್ ನಾಳ, ಇಬ್ರಾಹೀಂ ಸುಂಟಿಕೊಪ್ಪ ಮುಂತಾದವರು ಭಾಗವಹಿಸಿದ್ದರು.
ಎಮ್ಮೆಸ್ಸೆಂ ಝೈನೀ ಕಾಮಿಲ್ ಕಾರ್ಯಕ್ರಮ ನಿರ್ವಹಿಸಿದರು.
ಪಿ.ಎಂ.ಲತೀಫ್ ಸುಂಟಿಕೊಪ್ಪ ಅವರು ನೆರೆ ಸಂತ್ರಸ್ತರ ಪುನರ್ವಸತಿಗಾಗಿ ಸುಂಟಿಕೊಪ್ಪದಲ್ಲಿ ಒಂದು ಎಕರೆ ಜಾಗವನ್ನೂ ಇತ್ತೀಚೆಗೆ ಅಖಿಲ ಭಾರತ ಸುನ್ನೀ ಜಂಇಯ್ಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಮೂಲಕ ದಾನ ಮಾಡಿದ್ದರು. ಉದ್ಯಮಿಯಾಗಿರುವ ಲತೀಫ್ ಸುನ್ನೀ ಯುವಜನ ಸಂಘದ ಸಕ್ರಿಯ ಕಾರ್ಯಕರ್ತರಾಗಿದ್ದಾರೆ. ಅಲ್ಲದೇ, ಸುನ್ನೀ ಮ್ಯಾನೇಜ್ಮೆಂಟ್ ಅಸೋಸಿಯೇಶನ್ ಕೊಡಗು ಜಿಲ್ಲಾಧ್ಯಕ್ಷರಾಗಿ, ಕೊಡಗು ಜಿಲ್ಲೆಯ ವಕ್ಫ್ ಸಲಹಾ ಮಂಡಳಿಯ ಉಪಾಧ್ಯಕ್ಷರಾಗಿ ಸುಂಟಿಕೊಪ್ಪ ಟೌನ್ ಮುಸ್ಲಿಂ ಜಮಾಅತ್ ಅಧ್ಯಕ್ಷರಾಗಿ, ಸುಂಟಿಕೊಪ್ಪ ಇಹ್ಸಾನಿಯ್ಯ ಅಕಾಡಮಿಯ ಕೋಶಾಧಿಕಾರಿ ಸಹಿತ ಹಲವಾರು ಧಾರ್ಮಿಕ, ಸಾಮಾಜಿಕ, ರಾಜಕೀಯ ರಂಗಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.