ರಫೇಲ್ ಹಗರಣದಲ್ಲಿ ಪ್ರಧಾನಿ ಮೋದಿ ನೇರ ಭಾಗಿ: ಎಸ್.ಆರ್.ಹಿರೇಮಠ್ ಗಂಭೀರ ಆರೋಪ
ಬೆಂಗಳೂರು/ಹುಬ್ಬಳ್ಳಿ, ಸೆ. 24: ರಫೇಲ್ ಯುದ್ಧ ವಿಮಾನ ಖರೀದಿ ಸಂಬಂಧ ಕೇಂದ್ರ ಸರಕಾರ ಅರ್ಧ ಸತ್ಯವನ್ನು ಹೇಳುತ್ತಿದ್ದು, ಈ ಹಗರಣದಲ್ಲಿ ಸತ್ಯವನ್ನು ಮುಚ್ಚಿಡುತ್ತಿದೆ. ಪ್ರಧಾನಿ ಮೋದಿ ಈ ಹಗರಣದಲ್ಲಿ ನೇರವಾಗಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ್ ಆರೋಪಿಸಿದ್ದಾರೆ.
ಸೋಮವಾರ ಹುಬ್ಬಳ್ಳಿಯಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕ ಜೀವನದಲ್ಲಿ ವಿಶ್ವಾಸವಿದ್ದರೆ, ಸಂವಿಧಾನದ ಘನತೆ ಕಾಪಾಡಬೇಕೆಂಬ ಇಚ್ಛೆ ಇದ್ದರೆ ದೇಶದ ಜನತೆ ದಾರಿ ತಪ್ಪಿಸುವ ಹೇಳಿಕೆ ನೀಡುವುದನ್ನು ಕೇಂದ್ರ ಸಚಿವರು ಕೈಬಿಡಬೇಕು ಎಂದು ಸಲಹೆ ಮಾಡಿದರು.
ರಫೇಲ್ ಯುದ್ಧ ವಿಮಾನದ ಖರೀದಿ ಹಗರಣ ಬೆಳಕಿಗೆ ಬಂದಿದ್ದು, ಸಂಸತ್ತಿನ ಬಗ್ಗೆ ಕಾಳಜಿ, ಪ್ರಜಾಪ್ರಭುತ್ವದಲ್ಲಿ ವಿಶ್ವಾಸವಿದ್ದಲ್ಲಿ ಪ್ರಧಾನಿ, ಹಣಕಾಸು ಹಾಗೂ ರಕ್ಷಣಾ ಸಚಿವರು ಸಾಂವಿಧಾನಿಕ ಜವಾಬ್ದಾರಿ ಅರಿತು ಈ ಹಗರಣದಿಂದ ಹೊರಬರಬೇಕು ಎಂದು ಹಿರೇಮಠ್ ಸೂಚಿಸಿದರು.
ರಫೇಲ್ ಹಗರಣದಿಂದ ಕೇಂದ್ರ ಸರಕಾರ ಹೊರಬರದಿದ್ದರೆ, 1989ರಲ್ಲಿ ನಡೆದಿದ್ದ ಬೋಫೋರ್ಸ್ ಹಗರಣದಲ್ಲಿ ಕಾಂಗ್ರೆಸ್ ಸರಕಾರ ಸಿಕ್ಕಿಹಾಕಿಕೊಂಡು ಮನೆಗೆ ಹೋಗಿತ್ತು, ಇದೀಗ ಅದೇ ಸ್ಥಿತಿ ಬಿಜೆಪಿ ನೇತೃತ್ವದ ಎನ್ಡಿಎ ಸರಕಾರಕ್ಕೂ ಆಗಲಿದೆ ಎಂದು ಹಿರೇಮಠ್ ಎಚ್ಚರಿಸಿದರು. ಪ್ರತಿಪಕ್ಷಗಳು ರಫೇಲ್ ಹಗರಣದ ಬಗ್ಗೆ ಲೋಕಸಭೆಯಲಿ ಧ್ವನಿ ಎತ್ತಿ, ಸತ್ಯವನ್ನು ಬಯಲಿಗೆ ಎಳೆಯಬೇಕು ಎಂದ ಹಿರೇಮಠ್, ಪ್ರಧಾನಿ, ಕಾನೂನು, ಹಣಕಾಸು ಹಾಗೂ ರಕ್ಷಣಾ ಸಚಿವರು ಪಾರದರ್ಶಕವಾಗಿ ಈ ಹಗರಣದಿಂದ ಹೊರಬರಬೇಕು ಎಂದು ಹೇಳಿದರು.
‘ಲೋಕಾ’ ಬಲಪಡಿಸಿ: ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಮುಚ್ಚಿ, ಭ್ರಷ್ಟರಿಗೆ ಸಿಂಹಸ್ವಪ್ನವೇ ಆಗಿದ್ದ ಲೋಕಾಯುಕ್ತ ಸಂಸ್ಥೆಯನ್ನು ಬಲಪಡಿಸಬೇಕು. ಅಲ್ಲದೆ, ಅಕ್ರಮ ಗಣಿಗಾರಿಕೆ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹಿರೇಮಠ್ ಆಗ್ರಹಿಸಿದರು.