ಹನೂರು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾ ಸಭೆ
ಹನೂರು,ಸೆ.24: ಸಹಕಾರ ಸಂಘದ ರೈತರು ನಿಗದಿತ ಅವಧಿಯಲ್ಲಿ ಸಾಲ ಮರುಪಾವತಿ ಮಾಡಿ ಸರ್ಕಾರಿ ಸೌಲಭ್ಯ ಪಡೆದುಕೊಳ್ಳಿ ಎಂದು ಕೌದಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಂಗಸ್ವಾಮಿ ತಿಳಿಸಿದರು
ಸಮೀಪದ ಕೌದಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2017-18 ನೇ ಸಾಲಿನ ಸರ್ವಸದಸ್ಯರ ಮಹಾ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ಕಾಂಗ್ರೆಸ್ ಸರ್ಕಾರವಿದ್ದಾಗ ಸಂಘದ 152 ರೈತರ 78 ಲಕ್ಷ ಸಾಲ ಮನ್ನಾ ಮಾಡಲಾಯಿತು. ಈಗ ಸಮ್ಮಿಶ್ರ ಸರ್ಕಾರ ರೈತರ ಸಾಲ ಮನ್ನಾ ಘೋಷಣೆ ಮಾಡಿದ್ದು, 1.04 ಕೋಟಿ ರೂ ಸಾಲ ಮನ್ನಾ ಆಗುವುದಿದೆ ಎಂದು ತಿಳಿಸಿದರು.
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇರ್ಷಾದ್ ಅಹಮ್ಮದ್ ಷರೀಪ್ ರವರು 2017- 18 ನೇ ಸಾಲಿನ ಖರ್ಚು- ವೆಚ್ಚ ಓದಿ ಹೇಳಿದರು. 2018 ನೇ ಸಾಲಿನ ಆಯವ್ಯಯ ಅಂದಾಜು ಯೋಜನೆಯನ್ನು ಮಂಡಿಸಿ ಸರ್ವಸದಸ್ಯರ ಸಮ್ಮುಖದಲ್ಲಿ ಅನುಮೋದನೆ ಪಡೆಯಲಾಯಿತು. ಸಂಘವು 32 ಸಾವಿರ ನಿವ್ವಳ ಲಾಭಗಳಿಸಿದೆ ಎಂದು ತಿಳಿಸಿದರು.
ಈ ಸಂದರ್ಭ ಉಪಾಧ್ಯಕ್ಷ ಸೈಯ್ಯದ್ ಮುಲ್ತಾನ್ ಷಾ, ನಿರ್ದೇಶಕರುಗಳು, ಸಹಾಯಕ ಜಯಣ್ಣ, ಗ್ರಾಮದ ಯುವ ಮುಖಂಡ ನವೀದ್ ಮತ್ತು ಸದಸ್ಯ ರೈತರು ಭಾಗವಹಿಸಿದ್ದರು.