ನಗರಾಭಿವೃದ್ಧಿ ಇಲಾಖೆಯಲ್ಲಿ ಸಾರ್ವಜನಿಕರ ಅಲೆದಾಟ ತಪ್ಪಿಸಲು ಏಕಗವಾಕ್ಷಿ ಯೋಜನೆ ಜಾರಿ: ಸಚಿವ ಯು.ಟಿ.ಖಾದರ್
ಮೈಸೂರು,ಸೆ.29: ಸಾರ್ವಜನಿಕರ ಅಲೆದಾಟವನ್ನು ತಪ್ಪಿಸಲು ರಾಜ್ಯದ ನಗರಾಭಿವೃದ್ಧಿ ಇಲಾಖೆ ವ್ಯಾಪ್ತಿಗೆ ಒಳಪಡುವ ಎಲ್ಲಾ ಕಚೇರಿಗಳಲ್ಲೂ ಏಕಗವಾಕ್ಷಿ ಯೋಜನೆ ಜಾರಿಗೆ ತರಲಾಗುವುದು ಎಂದು ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ.ಖಾದರ್ ತಿಳಿಸಿದರು.
ನಗರದ ಮುಡಾ ಕಚೇರಿ ಆವರಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸಾರ್ವಜನಿಕರು ಇನ್ನುಮುಂದೆ ಖಾತೆ, ಕಟ್ಟಡಗಳ ಅನುಮತಿ, ನಿವೇಶನ ಅಭಿವೃದ್ದಿ, ಸೇರಿದಂತೆ ಇನ್ನಿತರ ಕೆಲಸ ಕಾರ್ಯಗಳಿಗೆ ಅಲೆಯುವುದನ್ನು ತಪ್ಪಿಸಲು ಒಂದೇ ಅರ್ಜಿಯಲ್ಲಿ ಎಲ್ಲಾ ವಿಭಾಗಗಳ ಕೆಲಸಗಳು ಅಡೆತಡೆ ಇಲ್ಲದಂತೆ ನಡೆಯಲು ಹೊಸ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ಹೇಳಿದರು.
ಒಬ್ಬ ವ್ಯಕ್ತಿ ತನ್ನ 30*40 ನಿವೇಶನ ಅಥವಾ ಮನೆ ಖಾತೆ ಮಾಡಿಸಿಕೊಳ್ಳಲು ತಿಂಗಳುಗಟ್ಟಲೆ ಅಲೆಯಬೇಕಿತ್ತು. ಆ ಸಂದರ್ಭದಲ್ಲಿ ಅಧಿಕಾರಿಗಳು ದಾಖಲಾತಿಗಳು ಸರಿಯಿಲ್ಲ ಎಂಬ ನೆಪವೊಡ್ಡಿ ಅಲೆಸುತಿದ್ದರು. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಆಯಾ ಕಚೇರಿಗಳು ಕೇಳಿರುವ ಎಲ್ಲಾ ದಾಖಲೆಗಳನ್ನು ಕಂಪ್ಯೂಟರ್ ಮೂಲಕ ತುಂಬಿದಲ್ಲಿ ಒಂದು ತಿಂಗಳೊಳಗೆ ನಿಮಗೆ ಅನುಮತಿ ದೊರೆಯಲಿದೆ. ಜೊತೆಗೆ ತಮ್ಮ ಮನೆ ಅಥವಾ ನಿವೇಶನದ ಪ್ರಮಾಣ ಪತ್ರವನ್ನು ತಾವೇ ಘೋಷಣೆ ಮಾಡಿಕೊಳ್ಳಬಹುದಾಗಿದೆ ಎಂದು ಹೇಳಿದರು.
ಆರ್ಥಿಕವಾಗಿ ಬಲಿಷ್ಠಗೊಂಡರೆ ನಗರಗಳ ಅಭಿವೃದ್ಧಿ: ಇನ್ನು ನಗರಗಳ ಅಭಿವೃದ್ದಿಗೆ ಆರ್ಥಿಕತೆ ಮುಖ್ಯ ಹಾಗಾಗಿ ಆರ್ಥಿಕವಾಗಿ ಬಲಿಷ್ಠಗೊಂಡರೆ ನಗರಗಳು ಅಭಿವೃದ್ಧಿ ಹೊಂದಲಿವೆ. ಏಕಗವಾಕ್ಷಿ ಯೋಜನೆ ಅನುಷ್ಠಾನಗೊಳ್ಳುತಿದ್ದಂತೆ ಜನರು ಸುಲಲಿತವಾಗಿ ತಮ್ಮ ಕಾರ್ಯಗಳನ್ನು ಮಾಡಿಸಿಕೊಳ್ಳಲಿದ್ದಾರೆ ಆಗ ಆರ್ಥಿಕ ಅಭಿವೃದ್ಧಿಯೂ ಹೆಚ್ಚಲಿದೆ. ಇದರಿಂದ ನಗರಗಳಲ್ಲಿ ಹೊಸ ಯೋಜನೆಗಳನ್ನು ಜಾರಿಗೆ ತರಬಹುದಾಗಿದೆ ಎಂದು ಸಚಿವ ಯು.ಟಿ.ಖಾದರ್ ಹೇಳಿದರು.
ದಸರಾ ಮುಗಿದ ನಂತರ ಮುಡಾ ಅದಾಲತ್: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಬಾಕಿ ಉಳಿದಿರುವ ಅರ್ಜಿಗಳ ವಿಲೇವಾರಿ, ಹೊಸ ಬಡಾವಣೆಗಳ ಅಭಿವೃದ್ಧಿ, ಸೇರಿದಂತೆ ಇನ್ನಿತರ ಬಾಕಿ ಇರುವ ಅರ್ಜಿಗಳನ್ನು ದಸರಾ ಮುಗಿದ ನಂತರ ಒಂದು ದಿನ ಮುಡಾ ಅದಾಲತ್ ಮಾಡಿ ವಿಲೇವಾರಿ ಮಾಡಲಾಗುವುದು. ನಾನು ಜಿಲ್ಲಾಧಿಕಾರಿಗಳು, ಮುಡಾ ಆಯುಕ್ತರ ಸಮ್ಮಖದಲ್ಲಿ ಈ ಕಾರ್ಯವನ್ನು ಮಾಡಲಾಗುವುದು. ಈಗಾಗಲೇ ಮಂಗಳೂರಿನಲ್ಲಿ ಅದಾಲತ್ ಮಾಡಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಾಗಾಗಿ ಇಲ್ಲೂ ಸಹ ಮಾಡುವುದಾಗಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಉನ್ನತ ಶಿಕ್ಷಣ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನಾ, ಮುಡಾ ಆಯುಕ್ತ ಕಾಂತರಾಜು, ಕಾರ್ಯದರ್ಶಿ ಸವಿತ ಮಹಾನಗರ ಪಾಲಿಕೆ ಆಯುಕ್ತ ಜಗದೀಶ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಪತ್ರಕರ್ತರಿಗೂ ನಿವೇಶನ ಮೀಸಲು:
ನಗರಾಭಿವೃದ್ಧಿ ಇಲಾಖೆಯ ನೂತನ ಬಡಾವಣೆಗಳಲ್ಲಿ ರಾಜ್ಯದ ಎಲ್ಲಾ ಪತ್ರಕರ್ತರುಗಳಿಗೂ ನಿವೇಶನಗಳನ್ನು ಮೀಸಲಿಡಲು ಚಿಂತಿಸಲಾಗುತ್ತಿದೆ ಎಂದು ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ.ಖಾದರ್ ಹೇಳಿದರು.
ಮುಡಾ ಕಚೇರಿಯ ಆವರಣದಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಹೊಸ ಬಡಾವಣೆಗಳ ನಿರ್ಮಾಣ ಸಂದರ್ಭದಲ್ಲಿ ಪತ್ರಕರ್ತರಿಗೆ ನಿವೇಶನ ಅಥವಾ ಮನೆಗಳನ್ನು ನೀಡಲು ಚಿಂತಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇಲಾಖೆಯ ಸಾಧಕ ಬಾಧಕಗಳನ್ನು ನೋಡಿಕೊಂಡು ಅನುಷ್ಠಾನಗೊಳಿಸುವುದಾಗಿ ಹೇಳಿದರು.