ವಿಶ್ವವಿಖ್ಯಾತ ಮೈಸೂರು ದಸರಾಗೆ ಸಂಭ್ರಮದ ಚಾಲನೆ
ಮೈಸೂರು, ಅ.10: ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವಕ್ಕೆ ಇಂದು ಮುಂಜಾನೆ ಚಾಮುಂಡಿ ಬೆಟ್ಟದಲ್ಲಿ ಚಾಲನೆ ದೊರೆಯಿತು.
ಚಾಮುಂಡಿ ಬೆಟ್ಟದಲ್ಲಿ ಹಾಕಲಾಗಿದ್ದ ವಿಶಾಲ ವೇದಿಕೆಯಲ್ಲಿ ಬೆಳ್ಳಿ ರಥದಲ್ಲಿ ಕುಳ್ಳಿರಿಸಲಾಗಿದ್ದ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ಬುಧವಾರ ಮುಂಜಾನೆ ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಲೇಖಕಿ ಸುಧಾ ನಾರಾಯಣಮೂರ್ತಿ ಪುಷ್ಪಾರ್ಚನೆ ಮಾಡಿ ನವರಾತ್ರಿ ಮಹೋತ್ಸವವನ್ನು ಉದ್ಘಾಟಿಸಿದರು.
ಇದೇ ವೇಳೆ ಸುಧಾ ಮೂರ್ತಿಯವರಿಗೆ ಮೈಸೂರು ಪೇಟ ತೊಡಿಸಿ ಹಾರ ಹಾಕಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉನ್ನತ ಶಿಕ್ಷಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಮುಜರಾಯಿ ಸಚಿವ ರಾಜಶೇಖರ ಬಸವರಾಜ ಪಾಟೀಲ್, ಕನ್ನಡ ಮತ್ತು ಸಂಸ್ಕೃತಿ ಸಚಿವೆ ಡಾ.ಜಯಮಾಲಾ, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಚ್.ವಿಶ್ವನಾಥ್, ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಕೆ.ಮಹದೇವ್, ನಿರಂಜನ್ಕುಮಾರ್, ಹರ್ಷವರ್ಧನ್, ಜಿಪಂ ಅಧ್ಯಕ್ಷೆ ನಯೀಮಾ ಸುಲ್ತಾನ ನಝೀರ್ ಅಹ್ಮದ್, ತಾಪಂ ಅಧ್ಯಕ್ಷೆ ಕಾಳೀರಮ್ಮ ಕೆಂಪಯ್ಯ, ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಬಸರಾಜು ಸ್ವಾಗತಿಸಿದರು. ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಅಪರ ಜಿಲ್ಲಾಧಿಕಾರಿ ಟಿ.ಯೋಗೀಶ್, ಜಿ.ಪಂ. ಕಾರ್ಯನಿರ್ವಹಣಾಧಿಕಾರಿ ಕೆ.ಜ್ಯೋತಿ ಸೇರಿದಂತೆ ಇಲಾಖೆ ಅಧಿಕಾರಿಗಳು ಹಾಜರಿದ್ದರು.
ಭವ್ಯ ಸ್ವಾಗತ: ದಸರಾ ಮಹೋತ್ಸವದ ಉದ್ಘಾಟಕಿ ಲೇಖಕಿ ಸುಧಾ ಮೂರ್ತಿಯವರನ್ನು ನಂದಿ ಧ್ವಜ, ವೀರಗಾಸೆ, ಡೊಳ್ಳುಕುಣಿತ, ಪೊಲೀಸ್ ಬ್ಯಾಂಡ್ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಲಾತಂಡಗಳ ಅದ್ದೂರಿ ಮೆರವಣಿಗೆಯೊಂದಿಗೆ ಪೂರ್ಣಕುಂಭ ಸ್ವಾಗತ ನೀಡಿ ಬರಮಾಡಿಕೊಳ್ಳಲಾಯಿತು.
ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಸಾರ್ವಜನಿಕರು ವೀಕ್ಷಿಸುವ ಗಣ್ಯರ ಸಾಲಿನಲ್ಲಿ ಕುಳಿತು ಪತ್ನಿ ದಸರಾ ಉದ್ಘಾಟನೆ ಮಾಡುವುದನ್ನು ಕಂಡು ಸಂತೋಷಪಟ್ಟರು. ಇದೇ ವೇಳೆ ಮಗಳು ಅಕ್ಷತಾ, ಸುಧಾ ಮೂರ್ತಿ ಅವರ ಸಹೋದರಿಯರು ಈ ಸಂಭ್ರದ ಗಳಿಗೆಯನ್ನು ಕಣ್ತುಂಬಿಕೊಂಡರು.