ಕೊಡಗು ನೆರೆ ಸಂತ್ರಸ್ತರಿಗೆ 25 ಕೋ.ರೂ. ವೆಚ್ಚದಲ್ಲಿ ಮನೆ ನಿರ್ಮಾಣ: ಸುಧಾ ಮೂರ್ತಿ
ಮೈಸೂರು, ಅ.10: ಕೊಡಗಿನಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ ಮನೆಗಳನ್ನು ಕಳೆದುಕೊಂಡ ಕುಟುಂಬಗಳಿಗೆ ಇನ್ಫೋಸಿಸ್ ಸಂಸ್ಥೆ ವತಿಯಿಂದ 25 ಕೋಟಿ ರೂ. ವೆಚ್ಚದಲ್ಲಿ ಮನೆ ನಿರ್ಮಿಸಿ ಕೊಡಲಾಗುವುದು ಎಂದು ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾ ಮೂರ್ತಿ ಘೋಷಿಸಿದರು.
ಚಾಮುಂಡಿ ಬೆಟ್ಟದಲ್ಲಿ ಬುಧವಾರ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಆಡದೇ ಮಾಡುವನು ರೂಢಿಯೊಳಗುತ್ತಮನು, ಆಡಿ ಮಾಡುವನು ಮಧ್ಯಮನು, ಅಧಮ ತಾನಾಡಿಯೂ ಮಾಡದವ ಎಂದು ಸರ್ವಜ್ಞನ ವಚನವನ್ನು ಉಲ್ಲೇಖಿಸಿ ಮಾತನಾಡಿದರು.
ಕೊಡಗು ಪ್ರವಾಹಕ್ಕೆ ಸಿಲುಕಿ ಅನೇಕರು ನಿರಾಶ್ರಿತರಾಗಿದ್ದಾರೆ. ಸರ್ಕಾರದ ಜೊತೆ ಕೆಲಸ ಮಾಡಬೇಕು. ಅದಕ್ಕಾಗಿ ಇನ್ಫೋಸಿಸ್ ವತಿಯಿಂದ ನಿರಾಶ್ರಿತರಿಗೆ ನಿವೇಶನ ನಿರ್ಮಾಣಕ್ಕಾಗಿ 25 ಕೋ.ರೂ. ನೀಡುವುದಾಗಿ ಸುಧಾಮೂರ್ತಿ ತಿಳಿಸಿದರು.
ಹೆಬ್ಬಾಳ ಕೆರೆಯ ಪುನರುತ್ಥಾನಕ್ಕೆ ಇನ್ಫೋಸಿಸ್ ಫೌಂಡೇಶನ್ ವತಿಯಿಂದ ಹಣಕಾಸಿನ ನೆರವು ಘೋಷಿಸಿದ ಸುಧಾಮೂರ್ತಿ, ‘ನನ್ನ ತಾಯಿ ಎಂದಿಗೂ ಕನ್ನಡಮ್ಮನೇ. ಕುಡಿಯುವುದು ಕಾವೇರಿ ನೀರು’ ಎಂದು ಸ್ವ ರಚಿತ ಕವನ ವಾಚಿಸಿದರು.