ಎನ್.ಮಹೇಶ್ ರಾಜೀನಾಮೆ ಸಮ್ಮಿಶ್ರ ಸರಕಾರದ ಪತನದ ಸಂಕೇತ: ಅರವಿಂದ ಲಿಂಬಾವಳಿ
ಬೆಂಗಳೂರು, ಅ.11: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಪತನಕ್ಕೆ ದಿನಗಣನೆ ಆರಂಭವಾದಂತಾಗಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಹೇಳಿದ್ದಾರೆ.
ಈ ಸಂಬಂಧ ಪತ್ರಿಕಾ ಪ್ರಕಟನೆ ಹೊರಡಿಸಿರುವ ಅವರು, ಈ ಹಿಂದೆ ಸರಕಾರದ ಅಸ್ತಿತ್ವಕ್ಕೆ ಆತಂಕ ಎದುರಾದ ಸಂದರ್ಭದಲ್ಲಿ ವಿನಾಕಾರಣ ಬಿಜೆಪಿಯನ್ನು ದೂರಲಾಯಿತು. ಆದರೆ, ಸಮ್ಮಿಶ್ರ ಸರಕಾರದ ಅಸ್ವಾಭಾವಿಕ ಮೈತ್ರಿ ಮತ್ತು ಅವಕಾಶವಾದಿ ರಾಜಕಾರಣದ ಪರಿಣಾಮವಾಗಿ ಸ್ಥಿರ ಸರಕಾರದ ಭರವಸೆ ರಾಜ್ಯದ ಜನರಿಗೆ ಮರಿಚಿಕೆಯಾಗಿದೆ ಎಂದು ತಿಳಿಸಿದ್ದಾರೆ.
ಈಗ ವಿರೋಧಾಭಾಸದ ಹೊಂದಾಣಿಕೆ ರಾಜಕಾರಣಕ್ಕೆ ಅದೇ ಸರಕಾರದಲ್ಲಿರುವ ಪಕ್ಷಗಳೇ ತಮ್ಮ ಬೆಂಬಲವಿಲ್ಲ ಎಂದು ಹೇಳಿದಂತಾಗಿದೆ. ಮಹೇಶ್ ಅವರ ರಾಜೀನಾಮೆಯ ಬೆಳವಣಿಗೆ ಹಠಾತ್ತನೆ ಜರುಗಿದ ರಾಜಕೀಯ ಘಟನಾವಳಿಯಂತು ಅಲ್ಲ. ಜೆಡಿಎಸ್ ಪಕ್ಷ ಕೇವಲ ಸರಕಾರದ ನೇತೃತ್ವ ವಹಿಸಿದ್ದರೂ ಕಾಂಗ್ರೆಸ್ ಪಕ್ಷವನ್ನು ಅಪ್ಪಿಕೊಂಡಿರುವುದರ ಹಿಂದೆ ಯಾವುದೇ ಸೈದ್ಧಾಂತಿಕ ಹೊಂದಾಣಿಕೆಯೇನೂ ಇರಲಿಲ್ಲ ಎಂದು ಅವರು ಟೀಕಿಸಿದ್ದಾರೆ.