ಸಚಿವರ ಹೆಸರು ಮರೆತ ಅಧಿಕಾರಿಗಳು: ಕೋಪಗೊಂಡು ಹೊರ ನಡೆದ ಸಚಿವ ಸಾ.ರಾ.ಮಹೇಶ್
ಮೈಸೂರು,ಅ.12: ಮಕ್ಕಳ ದಸರಾ ಉದ್ಘಾಟನಾ ಸಂದರ್ಭದಲ್ಲಿ ಕೃಷಿ ಸಚಿವ ಎನ್.ಹೆಚ್.ಶಿವಶಂಕರ ರೆಡ್ಡಿ ಹೆಸರನ್ನು ಹೇಳಲು ಮರೆತ ಅಧಿಕಾರಿಗಳ ವರ್ತನೆಯಿಂದ ಸಿಡಿಮಿಡಿಗೊಂಡ ಸಚಿವ ಸಾ.ರಾ ಮಹೇಶ್ ವೇದಿಕೆಯಿಂದ ಹೊರ ನಡೆದ ಪ್ರಸಂಗ ನಡೆಯಿತು.
ನಗರದ ಶಾರದ ವಿಲಾಸ ಆಡಿಟೋರಿಯಮ್ ನಲ್ಲಿ ಮಕ್ಕಳ ದಸರಾ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮವನ್ನು ನಿನ್ನೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಎನ್. ಮಹೇಶ್ ಉದ್ಘಾಟನೆ ಮಾಡಬೇಕಿತ್ತು. ಆದರೆ ಅವರು ಇಂದು ಈ ಕಾರ್ಯಕ್ರಮಕ್ಕೆ ಹಾಜರಾಗಿರಲಿಲ್ಲ. ರೈತ ದಸರಾ ಉದ್ಘಾಟಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಸಚಿವ ಸಾ.ರಾ.ಮಹೇಶ್ ಹಾಗೂ ಕೃಷಿ ಸಚಿವ ಶಿವಶಂಕರರೆಡ್ಡಿ ಕಾರ್ಯಕ್ರಮ ಉದ್ಘಾಟನೆ ಮಾಡಲು ತೆರಳಿದ್ದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಸ್ವಾಗತಿಸುವಾಗ ಸಚಿವ ಶಿವಶಂಕರರೆಡ್ಡಿ ಹೆಸರನ್ನು ಮರೆತ ಸ್ವಾಗತಗಾರರು ಹಾಗೂ ಅಧಿಕಾರಿಗಳ ಮೇಲೆ ಸಿಡಿಮಿಡಿಗೊಂಡ ಸಚಿವ ಸಾ.ರಾ.ಮಹೇಶ್ ವೇದಿಕೆಯಲ್ಲೇ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕಾರ್ಯಕ್ರಮವನ್ನು ಉದ್ಘಾಟಿಸಿ, ಕೋಪಗೊಂಡು ಕಾರ್ಯಕ್ರಮದಿಂದ ಹೊರ ನಡೆದರು.