ಚಾಮರಾಜನಗರ: ಅನೈತಿಕ ಸಂಬಂಧಕ್ಕೆ ಸಾಕ್ಷಿಯಾಗಿದ್ದ ಬಾಲಕನ ಕೊಲೆಗೈದ ದುಷ್ಕರ್ಮಿಗಳು
ಚಿಟ್ಟೆ ಆಸೆ ತೋರಿಸಿ ಹತ್ಯೆ
ಚಾಮರಾಜನಗರ,ಅ.13: ಅನೈತಿಕ ಸಂಬಂಧಕ್ಕೆ ಸಾಕ್ಷಿಯಾಗಿದ್ದ ಬಾಲಕನನ್ನು ಕೆರೆಯಲ್ಲಿ ಮುಳುಗಿಸಿ ಕೊಲೆ ಮಾಡಿದ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಸಿಲ್ಕಲ್ಪುರ ಗ್ರಾಮದಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಒಂದು ವಾರದಿಂದ ಕಾಣೆಯಾಗಿದ್ದ ಏಳು ವರ್ಷದ ಬಾಲಕ, ಕೊಳ್ಳೇಗಾಲ ತಾಲೂಕಿನ ಸಿಲ್ಕಲ್ ಪುರದಲ್ಲಿ ಶವವಾಗಿ ಪತ್ತೆಯಾಗಿದ್ದು, ಆದರೆ ಬಾಲಕನ ಸಾವಿನ ಹಿಂದಿನ ರಹಸ್ಯ ಬೇದಿಸಿದ ಪೊಲೀಸರಿಗೆ ಬಾಲಕನ ತಾಯಿಯ ಪ್ರಿಯಕರನೇ ಹಂತಕ ಎನ್ನುವ ಸಂಗತಿ ಗೊತ್ತಾಗಿದ್ದು, ತಾಯಿ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ.
ಕಳೆದ ಶನಿವಾರ ಸಿಲ್ಕಲ್ಪುರ ಗ್ರಾಮದ ನಂಜುಂಡಸ್ವಾಮಿಯವರ ಮಗ 7 ವರ್ಷದ ಬಾಲಕ ಪ್ರೀತಂ ನಿಗೂಢವಾಗಿ ಕಣ್ಮರೆಯಾಗಿದ್ದ. ಪೋಷಕರು ಮಗುವಿಗಾಗಿ ಹುಡುಕಾಟ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಬಗ್ಗೆ ಪೋಷಕರು ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ ನಾಪತ್ತೆಯಾಗಿದ್ದ ಪ್ರೀತಂನ ಶವ ಕೊಳೆತ ಸ್ಥಿತಿಯಲ್ಲಿ ಅ.10 ರಂದು ಗ್ರಾಮದ ಕೆರೆಯಲ್ಲಿ ಪತ್ತೆಯಾಗಿತ್ತು.
ಈ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ ಪ್ರೀತಂ ಸಾವಿನ ಹಿಂದೆ ಆತನ ತಾಯಿಯ ಕೈವಾಡ ಇರುವುದಾಗಿ ತಿಳಿದುಬಂದಿದ್ದು, ಅದರಂತೆ ಕೊಳ್ಳೇಗಾಲ ಗ್ರಾಮಾಂತರ ಪೊಲೀಸರು ಬಾಲಕನ ತಾಯಿ ಸಾಕಮ್ಮ ಮತ್ತು ಆಕೆಯ ಪ್ರಿಯಕರ ನಾಗರಾಜ್ ಮೂರ್ತಿಯವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತಾವೇ ಪ್ರೀತಂನನ್ನು ನೀರಿನಲ್ಲಿ ಮುಳುಗಿಸಿ ಕೊಂದಿದ್ದೇವೆ ಎನ್ನುವ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಈ ಮೂಲಕ ಬಾಲಕ ಪ್ರೀತಂ ಶವವಾಗಿ ಪತ್ತೆಯಾಗಿದ್ದ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಪ್ರಕರಣವನ್ನು ಕೊಳ್ಳೇಗಾಲ ಗ್ರಾಮಾಂತರ ಪೊಲೀಸರು ಭೇದಿಸಿದ್ದು, ಬಾಲಕನ ಸಾವಿಗೆ ಆತನ ತಾಯಿ ಅನ್ಯಪುರುಷನ ಜತೆ ಹೊಂದಿದ್ದ ಸಂಬಂಧವೇ ಕಾರಣ ಎನ್ನಲಾಗಿದೆ.
ಬಾಲಕನ ತಾಯಿ ಸಾಕಮ್ಮ ಮತ್ತು ಆಕೆಯ ಪ್ರಿಯಕರ ನಾಗರಾಜಮೂರ್ತಿ ಬಾಲಕನ ಕೊಲೆಯ ಆರೋಪಿಗಳಾಗಿದ್ದು, ಈಗ ಕಂಬಿ ಎಣಿಸುತ್ತಿದ್ದಾರೆ.
ಕೊಳ್ಳೇಗಾಲ ಸರ್ಕಲ್ ಇನ್ಸ್ಪೆಕ್ಟರ್ ರಾಜಣ್ಣ, ಗ್ರಾಮಾಂತರ ಸಬ್ ಇನ್ಸ್ಪೆಕ್ಟರ್ ವನರಾಜು ನೇತೃತ್ವದಲ್ಲಿ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಬಂಧಿಸಲಾಗಿದೆ.
ಕಳೆದ ಶನಿವಾರ ನಂಜುಂಡಸ್ವಾಮಿ ಎಂದಿನಂತೆ ಕೂಲಿ ಕೆಲಸಕ್ಕೆ ಹೊರ ಹೋಗಿದ್ದಾಗ ಶಾಲೆಯಿಂದ ಮನೆಗೆ ಬಂದ ಬಾಲಕ ಪ್ರೀತಂ ತನ್ನ ತಾಯಿ ಸಾಕಮ್ಮ ಗ್ರಾಮದ ನಾಗರಾಜ್ ಮೂರ್ತಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ಇರುವುದನ್ನು ಕಂಡು ಗಾಬರಿಗೊಂಡು ಕಿರುಚಾಡಿದ್ದಾನೆ. ಈ ವೇಳೆ ಸಾಕಮ್ಮ, ಗ್ರಾಮದವರಿಗೆ ತನ್ನ ಹಾಗೂ ನಾಗರಾಜ್ ಮೂರ್ತಿಯೊಂದಿಗಿನ ಅನೈತಿಕ ಸಂಬಂಧದ ಬಗ್ಗೆ ಗೊತ್ತಾಗಲಿದೆ ಎಂಬ ಭಯದಿಂದ ಮಗನನ್ನು ಕೊಲೆ ಮಾಡುವ ಸಂಚು ಹೂಡಿದ್ದಾರೆ. ಅದರಂತೆ ಪ್ರೀತಂನಿಗೆ ಚಿಟ್ಟೆ ಹಿಡಿದುಕೊಡುವ ಆಸೆ ತೋರಿಸಿದ ನಾಗರಾಜ್ಮೂರ್ತಿ, ಗ್ರಾಮದಂಚಿನಲ್ಲಿರುವ ಕೆರೆಗೆ ಕರೆದುಕೊಂಡು ಹೋಗಿ ಅಲ್ಲಿ ಚಿಟ್ಟೆ ಹಿಡಿಯುವ ನಾಟಕವಾಡಿ ಕೆರೆಯೊಳಗೆ ಪ್ರೀತಂನನ್ನು ತಳ್ಳಿ ಕಾಲಿನಿಂದ ತುಳಿದು ಕೊಲ್ಲಲಾಗಿದೆ ಎಂದು ತಿಳಿದುಬಂದಿದೆ.