ರಾಜೀನಾಮೆ ಹಿಂಪಡೆಯುವ ಪ್ರಶ್ನೆಯೇ ಇಲ್ಲ: ಎನ್.ಮಹೇಶ್
ಚಾಮರಾಜನಗರ,ಅ.13: ನನಗೆ ಅಧಿಕಾರಕ್ಕಿಂತ ಪಕ್ಷ ಮುಖ್ಯ. ಲೋಕಸಭೆ ಚುನಾವಣೆಯ ವೇಳೆಗೆ ಬಹುಜನ ಸಮಾಜ ಪಕ್ಷವನ್ನು ಸಂಘಟನೆ ಮಾಡುವ ಸಲುವಾಗಿ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಬೇಕಾಯಿತೇ ವಿನಃ ಬೇರೆ ಯಾವ ಕಾರಣದಿಂದಲೂ ಅಲ್ಲ. ಯಾವುದೇ ಕಾರಣಕ್ಕೂ ರಾಜಿನಾಮೆ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮಾಜಿ ಸಚಿವ ಎನ್.ಮಹೇಶ್ ಹೇಳಿದರು.
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ತಮ್ಮ ಕ್ಷೇತ್ರಕ್ಕೆ ಆಗಮಸಿದ ಎನ್.ಮಹೇಶ್ರವರನ್ನು ಬಹುಜನ ಸಮಾಜ ಪಕ್ಷದ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿಕೊಂಡ ಬಳಿಕ ಮಾದ್ಯಮದವರೊಂದಿಗೆ ಮಾತನಾಡುತ್ತಾ, ಪ್ರಾಥಮಿಕ ಫ್ರಾಢ ಶಿಕ್ಷಣ ಇಲಾಖೆ ಕೆಲಸ ಎಷ್ಟು ದೊಡ್ಡ ಕೆಲಸ ಅಂತ ನಾನು ಒಳಗೆ ಹೋದ ಮೇಲೆ ಗೊತ್ತಾಯಿತು. ನಾನೊಬ್ಬ ಗೆದ್ದು ಬಿಟ್ಟು ಅಧಿಕಾರಕ್ಕಾಗಿ ಇಡೀ ಸಮಯವನ್ನು ಅಲ್ಲೇ ಕಳೆದು ಬಿಟ್ಟರೆ, ನನ್ನ ಪಕ್ಷದ ಚಟುವಟಿಕೆಗಳು ಎಲ್ಲಿ ನಿಂತು ಹೋಗುತ್ತದೆ ಎಂಬ ಭಯ ಆಯಿತು ಎಂದು ಹೇಳಿದರು. ಲೋಕಸಭಾ ಚುನಾವಣೆಗೆ ಪಕ್ಷ ಕಟ್ಟಲು ನಾನು ರಾಜೀನಾಮೆ ನೀಡಿದ್ದೇನೆ. ಅಧಿಕಾರ ಮತ್ತು ಪಕ್ಷ ಇವೆರಡರ ನಡುವೆ ನನಗೆ ಪಕ್ಷವೇ ಮುಖ್ಯ ಎಂದರು.
ತಾನು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರೂ ಸರ್ಕಾರದ ಒಂದು ಭಾಗವಾಗಿದ್ದೇನೆ. ಯಾವುದೇ ಕಾರಣಕ್ಕೂ ರಾಜೀನಾಮೆ ವಾಪಸ್ ಪಡೆಯುವ ಮಾತೇ ಇಲ್ಲ ಎಂದು ಸ್ಪಷ್ಟಪಡಿಸಿದರು.