ಜಂಬೂಸವಾರಿ, ಪಂಜಿನ ಕವಾಯಿತು ಕಾರ್ಯಕ್ರಮಗಳ ಟಿಕೆಟ್ ಸೋಲ್ಡ್ ಔಟ್: ಸಾರ್ವಜನಿಕರ ಪ್ರತಿಭಟನೆ
ಮೈಸೂರು ದಸರಾ ಉತ್ಸವ
ಮೈಸೂರು,ಅ.17: ಜಂಬೂಸವಾರಿ ಹಾಗೂ ಪಂಜಿನ ಕವಾಯಿತು ಕಾರ್ಯಕ್ರಮಗಳ ಟಿಕೆಟ್ ಸೋಲ್ಡ್ ಔಟ್ ಆಗಿರುವುದರಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿ, ಟಿಕೆಟ್ ನೀಡುವ ಸ್ಥಳದಲ್ಲಿ ಸಾರ್ವಜನಿಕರು ಪ್ರತಿಭಟನೆಗಿಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅ.19ರಂದು ಅರಮನೆಯಿಂದ ಆರಂಭಗೊಳ್ಳುವ ಜಂಬೂಸವಾರಿ ವೀಕ್ಷಣೆಗೆ 1000, 500 ರೂ. ಹಾಗೂ ಬನ್ನಿಮಂಟಪದಲ್ಲಿ ನಡೆಯಲಿರುವ ಪಂಜಿನ ಕವಾಯಿತು ಕಾರ್ಯಕ್ರಮ ವೀಕ್ಷಣೆಗೆ 500, 250ರೂ. ಟಿಕೆಟ್ ದರವನ್ನು ನಿಗದಿ ಮಾಡಲಾಗಿದೆ. ಆದರೆ ಎರಡು ದಿನ ಇರುವಾಗಲೇ ಆನ್ಲೈನ್ ಹಾಗೂ ಟಿಕೆಟ್ ಕೌಂಟರ್ ಳಲ್ಲಿ ಟಿಕೆಟ್ ಸೋಲ್ಡ್ ಆಗಿದೆ ಎಂದು ಬೋರ್ಡ್ ಹಾಕಲಾಗಿದೆ.
ಜಿಲ್ಲಾಧಿಕಾರಿ ಕಚೇರಿಗೆ ಬುಧವಾರ ಆಗಮಿಸಿದ ಸಾರ್ವಜನಿಕರು ಬೆಳಗ್ಗೆಯಿಂದ ಟಿಕೆಟ್ಗಾಗಿ ಕಾದಿದ್ದಾರೆ. ಆದರೆ 10.30 ಕ್ಕೆ ಕಚೇರಿಗೆ ಆಗಮಿಸಿದ ಸಿಬ್ಬಂದಿ ಟಿಕೆಟ್ ಖಾಲಿಯಾಗಿವೆ ಎಂದು ಹೇಳುತ್ತಿದ್ದಂತೆ ರೊಚ್ಚಿಗೆದ್ದ ಸಾರ್ವಜನಿಕರು ಟಿಕೆಟ್ ನೀಡುವಂತೆ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು. ಮೂರು ದಿನಗಳಿಂದ ಬಂದು ಹೋಗುತ್ತಿದ್ದರೂ ಸರಿಯಾದ ಪ್ರತಿಕ್ರಿಯೆ ನೀಡದೇ, ಉಡಾಫೆ ಉತ್ತರ ನೀಡಿ ಟಿಕೆಟ್ ನೀಡುತ್ತಿಲ್ಲವೆಂದು ಕಿಡಿಕಾರಿದರು.