'ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರದಿಂದ ಸೋಲು' ಎಂಬ ಹೇಳಿಕೆಗೆ ಬದ್ಧ: ಡಿ.ಕೆ ಶಿವಕುಮಾರ್
ಬೆಂಗಳೂರು, ಅ.18: ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರಕ್ಕೆ ಕೈ ಹಾಕಿ ತಪ್ಪು ಮಾಡಿದ್ದೇವೆ. ಆತ್ಮಾವಲೋಕನ ಮಾಡಿಕೊಂಡು ಈ ಹೇಳಿಕೆ ನೀಡಿರುವುದಾಗಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಗುರುವಾರ ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮ, ಜಾತಿ ವಿಚಾರದಲ್ಲಿ ಸರಕಾರ ಹಾಗೂ ರಾಜಕೀಯ ಪಕ್ಷಗಳು ಹಸ್ತಕ್ಷೇಪ ಮಾಡಬಾರದು. ರಾಜಕೀಯದಲ್ಲಿ ಧರ್ಮ ಇರಬೇಕೇ ಹೊರತು, ಧರ್ಮದಲ್ಲಿ ರಾಜಕೀಯ ಇರಬಾರದು ಎಂದರು.
ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರಕ್ಕೆ ಕೈ ಹಾಕಿ ತಪ್ಪು ಮಾಡಿದ್ದೇವೆ ಎನ್ನುವ ಹೇಳಿಕೆಗೆ ನಾನು ಬದ್ಧನಾಗಿದ್ದು, ಪ್ರಜ್ಞಾ ಪೂರ್ವಕವಾಗಿ, ಆತ್ಮಾವಲೋಕನ ಮಾಡಿಕೊಂಡು ನಾನು ಹೇಳಿಕೆ ನೀಡಿದ್ದೇನೆ ಎಂದು ಸ್ಪಷ್ಟನೆ ನೀಡಿದರು.
ಏನು ಹೇಳಿಕೆ?: ಬುಧವಾರ ಗದಗದ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ 'ಧರ್ಮದ ವಿಚಾರದಲ್ಲಿ ನಮ್ಮ ಹಿಂದಿನ ಸರ್ಕಾರ ಕೈ ಹಾಕಿ ತಪ್ಪು ಮಾಡಿತು' ಎಂದು ಹೇಳಿ ಸಚಿವ ಡಿಕೆ ಶಿವಕುಮಾರ್ ಬಹಿರಂಗವಾಗಿ ಕ್ಷಮೆ ಯಾಚಿಸಿದ್ದರು.
'ರಾಜಕೀಯದವರು ಎಂದಿಗೂ ಧರ್ಮದ ವಿಚಾರಕ್ಕೆ ತಲೆ ಹಾಕಬಾರದು. ಆದರೆ, ನಮ್ಮ ಹಿಂದಿನ ಸರಕಾರ ಆ ತಪ್ಪು ಮಾಡಿತು. ಆ ಸರಕಾರದಲ್ಲಿ ನಾನೂ ಸಚಿವನಾಗಿದ್ದೆ. ಧರ್ಮದ ವಿಚಾರದಲ್ಲಿ ಕೈ ಹಾಕಿದ್ದಕ್ಕೆ ಇಲ್ಲಿ ಸಿಕ್ಕಿದ ಜನಾಭಿಪ್ರಾಯವೇ ಸಾಕ್ಷಿಯಾಯಿತು' ಎಂದು ಹೇಳಿದ್ದರು.