ಶಿವಮೊಗ್ಗ: ವೈದ್ಯರ ಮೇಲೆ ಹಲ್ಲೆ ನಡೆಸಿದ ಕೈದಿಗಳು
ಶಿವಮೊಗ್ಗ,ಅ.19: ನಗರದ ಹೊರವಲಯ ಸೋಗಾನೆ ಗ್ರಾಮದ ಬಳಿಯಿರುವ ಕೇಂದ್ರ ಕಾರಾಗೃಹದಲ್ಲಿ ಟ್ಯೂಬ್ಲೈಟ್ನಿಂದ ಹೊಡೆದುಕೊಂಡ ಕೈದಿಗಳಿಗೆ ಚಿಕಿತ್ಸೆ ನೀಡಲು ಹೋಗಿದ್ದ ಕಾರಾಗೃಹ ವೈದ್ಯಾಧಿಕಾರಿ ಡಾ. ರಘು ಪ್ರಸಾದ್ ಗೆ ಹಲ್ಲೆ ಮಾಡಿದ ಘಟನೆ ಗುರುವಾರ ನಡೆದಿದೆ.
ದೊಡ್ಡಪೇಟೆ ಠಾಣಾ ವ್ಯಾಪ್ತಿಯ ಕೊಲೆ ಆರೋಪಿಗಳಾದ ಅರ್ಬಾಜ್, ಶಾಬಾದ್ ಎಂಬ ಕೈದಿಗಳಿಂದ ವೈದ್ಯರ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಟ್ಯೂಬ್ಲೈಟ್ನಿಂದ ಹೊಡೆದುಕೊಂಡ ಕೈದಿಗಳು ಹೆಚ್ಚಿನ ಚಿಕಿತ್ಸೆಗೆ ನಗರದ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡುವಂತೆ ಒತ್ತಾಯಿಸಿದ್ದರು.
ಇದಕ್ಕೆ ಒಪ್ಪದ ವೈದ್ಯರಿಗೆ ಗಾಜಿನ ಚೂರಿನಿಂದ ಇರಿಯಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಜೈಲಿನ ಕೈದಿಗಳು ವೈದ್ಯರನ್ನು ಕಾಪಾಡಿದ್ದಾರೆ. ವೈದ್ಯರ ಕಿವಿಯ ಭಾಗಕ್ಕೆ ಸ್ವಲ್ಪ ಗಾಯವಾಗಿದೆ. ಹಲ್ಲೆ ಮಾಡಿದ ಕೈದಿಗಳನ್ನು ಬೆಳಗಾವಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗಿದೆ. ಈ ಕುರಿತು ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story