ಉಪ ಚುನಾವಣೆ ಗೆಲುವು: ಬಳ್ಳಾರಿ ಜನತೆಗೆ ಸಚಿವ ಡಿ.ಕೆ.ಶಿವಕುಮಾರ್ ಕೃತಜ್ಞತೆ ಸಲ್ಲಿಕೆ
ಬೆಂಗಳೂರು, ನ.7: ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಅವರಿಗೆ ಅಭೂತಪೂರ್ವ ಗೆಲುವು ತಂದುಕೊಟ್ಟಿರುವ ಬಳ್ಳಾರಿ ಜನತೆಗೆ ಜಿಲ್ಲಾ ಉಸ್ತುವಾರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
ಈ ಗೆಲುವು ಕೇವಲ ಚುನಾವಣೆ ಗೆಲುವಲ್ಲ. ಬಳ್ಳಾರಿ ಜನರ ಸ್ವಾಭಿಮಾನದ ಗೆಲುವು. ಆತ್ಮಗೌರವದ ಗೆಲುವು. ಸರ್ವಾಧಿಕಾರಿ ಧೋರಣೆ ವಿರುದ್ಧದ ಗೆಲುವು. 14 ವರ್ಷಗಳ ನಂತರ ಮತ್ತೆ ಕಾಂಗ್ರೆಸ್ ಪತಾಕೆ ಹಾರಿಸಿರುವ ಬಳ್ಳಾರಿ ಜನರ ವಿಶ್ವಾಸವನ್ನು ಇಮ್ಮಡಿಗೊಳಿಸುವ ರೀತಿಯಲ್ಲಿ ತಾವು ಮತ್ತು ತಮ್ಮ ಪಕ್ಷದವರು ಅಹರ್ನಿಶಿ ಶ್ರಮಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಈ ಗೆಲುವಿನ ಮೂಲಕ ನೀವು ನಮ್ಮ ಮೇಲೆ ಋಣ ಹೊರಿಸಿದ್ದೀರಿ. ಜವಾಬ್ದಾರಿ ಹೆಚ್ಚಿಸಿದ್ದೀರಿ. ನಿಮ್ಮ ಸೇವೆ ಮೂಲಕ ಅದನ್ನು ತೀರಿಸುವ ಸಂಕಲ್ಪ ನಮ್ಮದು. ಉಗ್ರಪ್ಪ ಬಳ್ಳಾರಿ ಧ್ವನಿಯನ್ನು ಸಂಸತ್ತಿನಲ್ಲಿ ಮೊಳಗಿಸಲಿದ್ದಾರೆ. ಇನ್ನೇನಿದ್ದರೂ ಬಳ್ಳಾರಿ ಕಟ್ಟುವ ಕೆಲಸ. ಅದನ್ನು ನಾವು, ನೀವು ಇಬ್ಬರೂ ಸೇರಿ ಮಾಡೋಣ ಎಂದು ಶಿವಕುಮಾರ್ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.