ಮೂಡಿಗೆರೆ: ಸಾವಿನಲ್ಲೂ ಸಾರ್ಥಕತೆ ಮೆರೆದ ಬಾಲಕಿ; ಆಸ್ಪತ್ರೆಗೆ ದೇಹ ದಾನ
ಮೂಡಿಗೆರೆ, ನ.7: ತನ್ನ ಸಾವಿನ ನಂತರ ನನ್ನ ದೇಹ ದಹನವಾಗದೆ ಸಮಾಜದ ಒಳಿತಿಗಾಗಿ ಉಪಯೋಗವಾಗಲೆಂದು ಬಯಸಿದ್ದ ಮೂಡಿಗೆರೆಯ ಬಾಲಕಿ ಪ್ರತೀಕ್ಷಾ ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಗೆ ತನ್ನ ದೇಹವನ್ನು ದಾನ ಮಾಡಿದ್ದಾಳೆ.
ತಾಲೂಕಿನ ಹಳೇಕೋಟೆ ಗ್ರಾಮದ ಮಂಜುನಾಥ ಭಟ್ಟರ ಮಗಳು ಶ್ರೀಮತಿ ವಂದನಾ ಕುಮಾರಸ್ವಾಮಿ ಎಂಬುವರ ಪುತ್ರಿ ಪ್ರತೀಕ್ಷಾ (15) ಮೂಳೆ ಕ್ಯಾನ್ಸರ್ ನಿಂದ ಬಳಲುತ್ತಿದ್ದಳು. ಮಂಗಳೂರಿನ ಶಾರದಾ ವಿದ್ಯಾಲಯದಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಈಕೆ ಪ್ರತಿಭಾನ್ವಿತೆಯಾಗಿದ್ದಳು. ತಾನು ವೈದ್ಯೆಯಾಗಬೇಕೆಂದು ಆಸೆ ಪಟ್ಟಿದ್ದಳು. ಆದರೆ ಅನಾರೋಗ್ಯದ ಕಾರಣದಿಂದ ಅ.31ರಂದು ಇಹಲೋಕ ತ್ಯಜಿಸಿದ್ದಾಳೆ.
ತನ್ನ ದೇಹವನ್ನು ಸಂಶೋಧನೆಗೆ ಸಹಾಯವಾಗಲು ದಾನ ಮಾಡಬೇಕೆಂಬುದು ಕೊನೆಯ ಇಚ್ಛೆಯನ್ನು ತಿಳಿಸಿದ್ದರಿಂದ ಪೋಷಕರು ಮಗಳ ದೇಹವನ್ನು ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾನ ಮಾಡಿದ್ದಾರೆ. ಪ್ರತೀಕ್ಷಾಳ ಆತ್ಮಕ್ಕೆ ಶಾಂತಿ ಕೋರಿ ಮೂಡಿಗೆರೆಯ ಶ್ರೀ ಕೃಷ್ಣಾ ಭಜನಾ ಮಂಡಳಿ ಪದಾದಿಕಾರಿಗಳು ಹಾಗೂ ಸದಸ್ಯರು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.