ದೃಶ್ಯಮಾಧ್ಯಮಗಳಿಂದ ಕನ್ನಡದ ಕೊಲೆ: ಜೆಎನ್ಯು ಕನ್ನಡ ವಿಭಾಗದ ಮುಖ್ಯಸ್ಥ ಪುರುಷೋತ್ತಮ ಬಿಳಿಮಲೆ
ದಾವಣಗೆರೆ,ನ,8: ಈಗಿನ ದೃಶ್ಯ ಮಾಧ್ಯಮಗಳು ಕನ್ನಡವನ್ನು ಕೊಲ್ಲುತ್ತಿವೆ. ಅವರು ಬಳಸುತ್ತಿರುವ ಕನ್ನಡದಲ್ಲಿ ಶೇ 60ರಷ್ಟು ಇಂಗ್ಲಿಷ್ ಪದಗಳೇ ಇವೆ ಎಂದು ನವದೆಹಲಿ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದರು.
ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜು, ಸ್ನಾತಕೋತ್ತರ ವಿಭಾಗದಿಂದ ಕಾಲೇಜು ಸಭಾಂಗಣದಲ್ಲಿ 'ಸಾಹಿತ್ಯದ ಹೊಸದಿಕ್ಕು' ಬಗ್ಗೆ ಅವರು ವಿಶೇಷ ಉಪನ್ಯಾಸ ನೀಡಿದರು.
ಪ್ರಾದೇಶಿಕ ಭಾಷೆಯ ಮಾಧ್ಯಮಗಳು ಆ ಭಾಷೆಯ ಬೆಳವಣಿಗೆಗೆ ಕೊಡುಗೆ ನೀಡಬೇಕು. ಆದರೆ ಕನ್ನಡದ ಬಗ್ಗೆ ಕೀಳರಿಮೆ ಮೂಡಲು ಇವರೇ ಮುಖ್ಯ ಕಾರಣರಾಗುತ್ತಿದ್ದಾರೆ. ತಮಿಳರು ನಡೆಸುತ್ತಿದ್ದ ಕನ್ನಡ ಚಾನಲ್ನಲ್ಲಿ ಸರಿಯಾದ ಕನ್ನಡ ಇತ್ತು. ಆದರೆ ಕನ್ನಡಿಗರೇ ನಡೆಸುತ್ತಿರುವ ಕನ್ನಡ ಚಾನಲ್ಗಳು ಕನ್ನಡವನ್ನೇ ನಾಶ ಮಾಡುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಕನ್ನಡವು ಪುಸ್ತಕದಲ್ಲಿ, ಮಾತಿನಲ್ಲಿ ಮಾತ್ರ ಇರುವುದಲ್ಲ. ಕನ್ನಡದ ಸೊಬಗು ನಮ್ಮ ಸುತ್ತಮುತ್ತಲಿನಲ್ಲಿಯೇ ಇದೆ. ಆದರೆ, ಅದನ್ನು ನೋಡುವುದನ್ನು ನಾವು ಕಲಿತಿಲ್ಲ. ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ಏಳೆಂಟು ಲಕ್ಷ ಜನ ಸೇರುತ್ತಾರೆ. ಅಲ್ಲಿ ಕೊನೇ ದಿನ ಒಂದು ವಾಕ್ಯ ಕಾರಣಿಕ ಹೇಳಲಾಗುತ್ತದೆ. ಅದನ್ನು ಜನ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ತಮಗೆ ಬೇಕಾದ ಹಾಗೆ ಅರ್ಥ ಹೇಳುತ್ತಾರೆ. ಈ ರೀತಿಯ ಪುನರ್ ಸೃಷ್ಟಿಯೇ ಕನ್ನಡದ ಸಂಸ್ಕೃತಿ ಎಂದು ಹೇಳಿದರು.
ಸಂಸ್ಕೃತಿ ಚಿಂತಕ ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ ಕಾರ್ಯ ಕ್ರಮ ಉದ್ಘಾಟಿಸಿದರು. ಪ್ರಾಂಶುಪಾಲ ಪ್ರೊ. ಶಂಕರ್ ಆರ್. ಶೀಲಿ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಬಸವರಾಜ ತೂಲಹಳ್ಳಿ, ಪ್ರೊ. ವೀರನಾಯಕ, ಪ್ರೊ. ವೀರೇಶ್, ಎಸ್.ಆರ್. ಭಜಂತ್ರಿ, ಡಾ.ಎಲ್. ಮರುಳಸಿದ್ದಪ್ಪ, ಡಾ. ಆರ್.ಸಿ. ನಾಗರಾಜ್, ಡಾ.ನಾರಾಯಣ ಸ್ವಾಮಿ ಇದ್ದರು. ಸ್ನಾತಕೋತ್ತರ ವಿಭಾಗ ಸಂಯೋಜಕ ಡಾ.ಎಂ. ಮಂಜಣ್ಣ ಸ್ವಾಗತಿಸಿದರು. ಪ್ರಭಾಕರ ಅತಿಥಿಗಳನ್ನು ಪರಿಚಯಿಸಿದರು. ವೆಂಕಟೇಶ್ ಬಾಬು ವಂದಿಸಿದರು. ಡಾ. ಶಿವಕುಮಾರ್ ಕಂಪ್ಲಿ ಕಾರ್ಯಕ್ರಮ ನಿರೂಪಿಸಿದರು.