ನ.19 ರಂದು ರೈತರಿಂದ ವಿಧಾನಸೌಧ ಮುತ್ತಿಗೆ
ಗುಬ್ಬಿ,ನ 08: ರೈತರ ಸಂಪೂರ್ಣ ಸಾಲ ಮನ್ನಾ ಕುರಿತಂತೆ ಮೈತ್ರಿ ಸರಕಾರ ಸ್ಪಷ್ಟ ನಿರ್ಧಾರ ಪ್ರಕಟಿಸದ ಹಿನ್ನೆಲೆಯಲ್ಲಿ ರೈತರ ಮೇಲೆ ನಿರಂತರ ಪ್ರಹಾರಗಳು ನಡೆಯುತ್ತಿದ್ದು, ಸರಕಾರದ ಈ ವೈಫಲ್ಯವನ್ನು ಖಂಡಿಸಿ ನ.19 ರಂದು ರೈತ ಸಂಘದಿಂದ ವಿಧಾನ ಸೌಧ ಮುತ್ತಿಗೆ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ತಿಳಿಸಿದ್ದಾರೆ.
ಪಟ್ಟಣದಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಅವರು, ಸಾಲಮನ್ನಾ ಕುರಿತಂತೆ ಈಗಾಗಲೇ ಸರಕಾರ ಮತ್ತು ಬ್ಯಾಂಕುಗಳ ನಡುವಿನ ಮಾತುಕತೆ ಪೂರ್ಣಗೊಂಡಿದ್ದರೂ, ಕೆಲ ಬ್ಯಾಂಕುಗಳು ಬೆಳೆ ಸಾಲ ಮರುಪಾವತಿಗಾಗಿ ರೈತರಿಗೆ ನೊಟೀಸ್ ನೀಡುತ್ತಿದ್ದು, ಮನೆಯ ವಸ್ತುಗಳನ್ನು ಹರಾಜು ಹಾಕುವ ಬೆದರಿಕೆ ಹಾಕುತ್ತಿವೆ. ಇದು ರೈತರಲ್ಲಿ ಗೊಂದಲ ಮೂಡಿಸಿದೆ. ಸರಕಾರ ಪುನಃ ಬ್ಯಾಂಕುಗಳೊಂದಿಗೆ ಮಾತುಕತೆ ನಡೆಸುವುದನ್ನು ಕೈಬಿಟ್ಟು ನೇರವಾಗಿ ರೈತರ ಸಾಲಮನ್ನಾ ತಿರುವಳಿ ಪತ್ರವನ್ನು ನೀಡಲಿ ಎಂದು ಆಗ್ರಹಿಸಿ ಈ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಮುಖಂಡರಾದ ಕೆ.ಎನ್.ವೆಂಕಟೇಶಗೌಡ, ಜಿ.ಶಿವಕುಮಾರ್, ಸಿ.ಜಿ. ಲೋಕೆಹಸಿರು ಸೇನೆಯ ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.