ಪ್ರತಾಪ್ ಸಿಂಹ, ಅನಂತ ಕುಮಾರ್, ನಳಿನ್ ಕಟೀಲ್ ರಿಗೆ ಮಾತಿನ ಮೇಲೆ ಪ್ರಜ್ಞೆ ಇಲ್ಲ: ಸಿದ್ದರಾಮಯ್ಯ
ಮೈಸೂರು,ನ.10: ಆಚರಣೆಗಳನ್ನು ವಿರೋಧಿಸುವವರೇ ನಿಜವಾದ ಮತಾಂಧರು, ಕೋಮುವಾದಿಗಳು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಮತಾಂಧ ಎನ್ನುವ ಹೇಳಿಕೆಗೆ ತಿರುಗೇಟು ನೀಡಿದರು. ಬಿಜೆಪಿಯ ಮಂದಿ ಕೋಮುವಾದಿಗಳು. ಮತಾಂಧ ಅಂದ್ರೆ ಏನು? ಆಚರಣೆಗಳನ್ನು ವಿರೋಧಿಸುವವರೇ ನಿಜವಾದ ಮತಾಂಧರು, ಕೋಮುವಾದಿಗಳು. ಹಾಗಿದ್ದರೆ ಬಿಜೆಪಿಯವರು ಕೋಮುವಾದಿಗಳು ಎಂದರು.
ಎಲ್ಲಾ ಧರ್ಮವನ್ನೂ ಪ್ರೀತಿಸುವವರೇ ಹಿಂದೂಗಳು. ದಯವೇ ಧರ್ಮದ ಮೂಲವಯ್ಯ ಎಂದು ಬಸವಣ್ಣನವರು ಹೇಳಿದ್ದಾರೆ. ಹಿಂದೂಗಳು ಸರ್ವಧರ್ಮ ಸಹಿಷ್ಣುಗಳು. ಟಿಪ್ಪು ಜಯಂತಿ ವಿರೋಧಿಸುವವರು ಹಿಂದೂಗಳಾ ? ಪ್ರತಾಪ್ ಸಿಂಹ, ಅನಂತ ಕುಮಾರ್, ನಳಿನ್ ಕುಮಾರ್ ಕಟೀಲ್ ಈ ಮೂವರಿಗೂ ಮಾತಿನ ಮೇಲೆ ಪ್ರಜ್ಞೆ ಇಲ್ಲ. ರಾಜಕೀಯ ಲಾಭಕ್ಕಾಗಿ ಬಿಜೆಪಿಯಿಂದ ವಿರೋಧ ವ್ಯಕ್ತವಾಗಿತ್ತು. ಈಗ ಟಿಪ್ಪು ಜಯಂತಿ ಯಶಸ್ವಿಯಾಗಿದೆ. ಕೆಲವರು ಟಿಪ್ಪು ಜಯಂತಿ ವಿರೋಧಿಸಿ ರಾಜಕೀಯ ಲಾಭ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂದರು.