ಈಶ್ವರಪ್ಪನ ತಲೆಯಲ್ಲಿ ಮೆದುಳಿಲ್ಲ: ಸಿದ್ದರಾಮಯ್ಯ
ಗದಗ, ನ. 11: ಶಾಸಕ ಕೆ.ಎಸ್.ಈಶ್ವರಪ್ಪ ಓರ್ವ ದಡ್ಡ. ಆತನ ತಲೆಯಲ್ಲಿ ಮೆದುಳಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ, ಈಶ್ವರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನನಗೆ ‘ಅಹಿಂದ ನಾಯಕ’ ಎಂದು ಯಾವ ವಿಶ್ವ ವಿದ್ಯಾಲಯವು ಸರ್ಟಿಫಿಕೇಟ್ ನೀಡಿಲ್ಲ. ಹೀಗಿರುವಾಗ ಈ ಸಂಬಂಧ ಈಶ್ವರಪ್ಪ ನೀಡಿರುವ ಹೇಳಿಕೆ ಅರ್ಥಹೀನ ಎಂದು ಹರಿಹಾಯ್ದರು.
ಬಳ್ಳಾರಿ ಲೋಕಸಭೆ ಮತ್ತು ಜಮಖಂಡಿ ವಿಧಾನಸಭಾ ಕ್ಷೇತ್ರ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಭಾರೀ ಅಂತರದಿಂದ ಜಯಗಳಿಸಿದೆ. ಬಿಜೆಪಿಯನ್ನು ಜನರು ತಿರಸ್ಕರಿಸಲು ತೀರ್ಮಾನ ಮಾಡಿದ್ದಾರೆಂಬುದನ್ನು ಇದು ತೋರಿಸುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.
ಸಂಪುಟ ವಿಸ್ತರಣೆ ಕುರಿತು ಹೈಕಮಾಂಡ್ ಜೊತೆ ಚರ್ಚಿಸಿದ ನಂತರ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು. ಬಿಜೆಪಿ ವರ್ಚಸ್ಸು ಹಾಳು ಮಾಡಲು ಕಾಂಗ್ರೆಸ್ ಕುತಂತ್ರ ಮಾಡುತ್ತಿದೆ ಎಂಬ ರೆಡ್ಡಿ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ರೆಡ್ಡಿ ಬಿಜೆಪಿಯಲ್ಲಿಲ್ಲ ಎಂದು ಬಿಎಸ್ವೈ ಸ್ಪಷ್ಟಪಡಿಸಿದ್ದು, ರೆಡ್ಡಿ ಆರೋಪಕ್ಕೆ ಅರ್ಥವೇ ಇಲ್ಲ ಎಂದು ತಿರುಗೇಟು ನೀಡಿದರು.