ಬಸ್ ಗಳ ಮುಖಾಮುಖಿ ಢಿಕ್ಕಿ: 15ಕ್ಕೂ ಅಧಿಕ ಮಂದಿಗೆ ಗಾಯ
ಹನೂರು, ನ.14: ಖಾಸಗಿ ಬಸ್ ಮತ್ತು ತಮಿಳುನಾಡು ಸರ್ಕಾರಿ ಬಸ್ ಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಮಲೆ ಮಾದೇಶ್ವರ ಬೆಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಪಾಲರ್ ರಸ್ತೆಯ ನಾಲ್ಕನೇ ತಿರುವಿನಲ್ಲಿ ಬುಧವಾರ ಬೆಳಗ್ಗೆ ನಡೆದಿದೆ
ತಮಿಳುನಾಡಿನ ಸರ್ಕಾರಿ ಬಸ್ ಚಾಲಕ ಪಳನಿಸ್ವಾಮಿ, ಕಂಡಕ್ಟರ್ ನಾಗರಾಜು, ವಿಜಯ, ರವಿ, ಮೂರ್ತಿ, ರಾಮಲಿಂಗಂ, ಎಂಬವರು ತೀವ್ರ ಗಾಯಗೊಂಡಿದ್ದಾರೆ. ಇತರ ಐವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ತಮಿಳುನಾಡಿನ ಮೆಟ್ಟೂರು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ
ಘಟನೆ ವಿವರ: ಇಂದು ಮುಂಜಾನೆ ಮಲೆ ಮಾದೇಶ್ವರ ಬೆಟ್ಟದಿಂದ ಮೆಟ್ಟೂರು ಕಡೆಗೆ ತೆರಳುತ್ತಿದ್ದ ವೆಂಕಟೇಶ್ವರ ಖಾಸಗಿ ಬಸ್ಸು ಮತ್ತು ಮೇಟೂರು ಕಡೆಯಿಂದ ಮಲೆ ಮಾದೇಶ್ವರ ಬೆಟ್ಟಕ್ಕೆ ಬರುತ್ತಿದ್ದ ಸರ್ಕಾರಿ ಬಸ್ ಗಳ ನಡುವೆ 7 ಗಂಟೆ ಸುಮಾರಿಗೆ ಪಾಲಾರ್ ರಸ್ತೆಯ 4ನೇ ತಿರುವಿನಲ್ಲಿ ಅಪಘಾತ ಸಂಭವಿಸಿದೆ.
ಸುದ್ದಿ ತಿಳಿದು ತಕ್ಷಣ ಸ್ಥಳಕ್ಕಾಗಮಿಸಿದ ಮಲೆ ಮಾದೇಶ್ವರ ಬೆಟ್ಟ ವೃತ್ತ ನಿರೀಕ್ಷಕ ಮಹೇಶ್ ಕುಮಾರ್ ಹಾಗೂ ಪೇದೆ ಮಣಿ ಪರಿಶೀಲನೆ ನಡೆಸಿದ್ದಾರೆ. ಇದೇ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ 108 ತುರ್ತು ವೈದ್ಯಕೀಯ ವಾಹನದ ಇಎಂಟಿ ಪಂದಯ್ಯ ಹಾಗೂ ಚಾಲಕ ರಾಜಕುಮಾರ್ ಗಾಯಾಳುಗಳನ್ನು ಪ್ರಥಮ ಚಿಕಿತ್ಸೆ ನೀಡಿ ತಮಿಳುನಾಡಿನ ಮೆಟ್ಟೂರು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಿದ್ದಾರೆ.
ಈ ಸಂಬಂಧ ಮಲೆ ಮಹದೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.