ಶಿವಮೊಗ್ಗ: ಗ್ಯಾಸ್ ಸಿಲಿಂಡರ್ ಸಾಗಾಟದ ಲಾರಿ ಸ್ಫೋಟ; ಚಾಲಕ ಸಜೀವ ದಹನ
ಸಾಗರ, ನ.15: ಎಲ್ಪಿಜಿ ಗ್ಯಾಸ್ ಸಿಲಿಂಡರ್ ತುಂಬಿದ್ದ ಲಾರಿಯೊಂದು ಇಂದು ಮುಂಜಾನೆ ಉರುಳಿಬಿದ್ದ ಪರಿಣಾಮ ಸಿಲಿಂಡರ್ ಗಳು ಸ್ಫೋಟಗೊಂಡು ಚಾಲಕ ಸಜೀವವಾಗಿ ದಹನಗೊಂಡಿರುವ ಘಟನೆ ಸಾಗರದ ಮಂಡಿಗೆಹಳ್ಳದಲ್ಲಿ ನಡೆದಿದೆ.
ಸಾಗರದಿಂದ ಕಾರ್ಗಲ್ ಕಡೆಗೆ ಸಿಲಿಂಡರ್ ಹೊತ್ತುಕೊಂಡು ಲಾರಿ ಸಂಚರಿಸುತಿತ್ತು. ಈ ಸಮಯದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಉರುಳಿಬಿದ್ದಿದೆ. ಬಿದ್ದ ರಭಸಕ್ಕೆ 20ಕ್ಕೂ ಹೆಚ್ಚು ಸಿಲಿಂಡರ್ ಗಳು ಸ್ಫೋಟಗೊಂಡಿವೆ. ಸ್ಫೋಟದಿಂದ ಬೆಂಕಿ ಹತ್ತಿಕೊಂಡು ಚಾಲಕ ಸಜೀವವಾಗಿ ದಹನಗೊಂಡಿದ್ದಾನೆ.
ಇಂಡಿಯನ್ ಗ್ಯಾಸ್ ಸಂಸ್ಥೆಗೆ ಸೇರಿದ ಲಾರಿ ಇದಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಿಯಂತ್ರಿಸಿದ್ದಾರೆ. ಸಾಗರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಲಾರಿ ಸಂಪೂರ್ಣ ಭಸ್ಮವಾಗಿದ್ದು, ಚಾಲಕ ಯಾರು, ಲಾರಿಯಲ್ಲಿ ಎಷ್ಟು ಜನರಿದ್ದರು ಎನ್ನುವ ಮಾಹಿತಿ ಇನ್ನೂ ಸ್ಪಷ್ಟವಾಗಿಲ್ಲ. ಲಾರಿಯ ನಂಬರ್ ಪ್ಲೇಟ್ ಸಹ ಹೊತ್ತಿ ಉರಿದ ಪರಿಣಾಮ ಮಾಲಕರು ಯಾರು ಎನ್ನುವುದು ತಿಳಿದು ಬಂದಿಲ್ಲ. ಚಾಲಕನ ಒಂದು ಮೃತದೇಹ ಮಾತ್ರ ಸದ್ಯ ಪತ್ತೆಯಾಗಿದೆ.