ಹನೂರು: ಜಮೀನಿನಲ್ಲಿ ಗಾಂಜಾ ಬೆಳೆದಿದ್ದ ಇಬ್ಬರ ಬಂಧನ
ಹನೂರು,ನ.17: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ತಮ್ಮ ಜಮೀನುಗಳಲ್ಲಿ ಗಾಂಜಾವನ್ನು ಬೆಳೆದಿದ್ದ ಆರೋಪಿಗಳನ್ನು ಪಿಎಸ್ಐ ಮೋಹಿತ್ ಸಹದೇವ್ ನೇತೃತ್ವದಲ್ಲಿ ಬಂಧಿಸಿದ ಘಟನೆ ಹನೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕ್ಷೇತ್ರ ವ್ಯಾಪ್ತಿಯ ಲೋಕ್ಕನಹಳ್ಳಿ ಸಮೀಪದ ಹೂಸಪೋಡು ಗ್ರಾಮದ ಪಿಣಾಶಿ ಜಡಯ್ಯ ಹಾಗೂ ಚಿಕ್ಕಸಿದ್ದ ಬಂಧಿತ ಆರೋಪಿಗಳು. ಈ ಇಬ್ಬರೂ ತಮ್ಮ ಜಮೀನಿನ ಜೋಳದ ಫಸಲಿನ ಮದ್ಯೆ ಗಾಂಜಾವನ್ನು ಬೆಳೆದಿದ್ದರು. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಡಿವೈಎಸ್ಪಿ ಪುಟ್ಟಮಾದಯ್ಯ ರವರ ಮಾರ್ಗದರ್ಶನದಲ್ಲಿ ಇನ್ಸ್ ಪೆಕ್ಟರ್ ಮೋಹಿತ್ ಸಹದೇವ್ ನೇತೃತ್ವದಲ್ಲಿ ದಾಳಿ ನಡೆಸಿ ಪಿಣಾಸಿ ಜಡಯ್ಯರ ಜಮೀನಿನಲ್ಲಿದ್ದ 4.3 ಕೆಜಿ ಮತ್ತು ಚಿಕ್ಕಸಿದ್ದರ ಜಮೀನಿನಲ್ಲಿದ್ದ 2.75 ಕೆಜಿ ಗಾಂಜಾವನ್ನು ವಶಪಡಿಸಿ, ಇಬ್ಬರೂ ಆರೋಪಿಗಳನ್ನು ಬಂಧಿಸಿ ನ್ಯಾಯಾಲಕ್ಕೆ ಹಾಜರುಪಡಿಸಿದ್ದಾರೆ.
ಈ ಸಂಬಂಧ ಹನೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾಳಿಯ ವೇಳೆ ಸಬ್ ಇನ್ಸ್ಪೆಕ್ಟರ್ ನಾಗೇಶ್, ಮುಖ್ಯ ಪೇದೆಗಳಾದ ಸಿದ್ದೇಶ್ , ರಾಮಾದಾಸ್, ಸಿಬ್ಬಂದಿಗಳಾದ ರಾಜು, ಮಲ್ಲಿಕಾರ್ಜುನ್ ಸ್ವಾಮಿ ಹೂವಯ್ಯ, ಬಿಳಿಗೌಡ, ಪ್ರದೀಪ್, ಚಂದ್ರು ಸೇರಿದಂತೆ ಇನ್ನಿತರರಿದ್ದರು.