ಹನೂರು: ಸಾಮೂಹಿಕ ಸತ್ಯನಾರಾಯಣ ಪೂಜೆ, ಪದಗ್ರಹಣ ಕಾರ್ಯಕ್ರಮ
ಹನೂರು,ನ.17: ಲೋಕ ಕಲ್ಯಾಣಾರ್ಥ ಹಾಗೂ ಕಾಲ ಕಾಲಕ್ಕೆ ಉತ್ತಮ ಮಳೆ ಬೆಳೆಗಳಾಗಲಿ ಎಂಬ ಉದ್ದೇಶದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆಯಂತಹ ಧಾರ್ಮಿಕ ಕಾರ್ಯಗಳನ್ನು ಆಯೋಜಿಸಿರುವುದು ಅಭಿನಂದನೀಯ ಎಂದು ಶಾಸಕ ಆರ್.ನರೇಂದ್ರರಾಜುಗೌಡ ತಿಳಿಸಿದರು,
ತಾಲೂಕಿನ ರಾಮಾಪುರ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಶ್ರೀ ಸತ್ಯನಾರಾಯಣ ಪೂಜಾಸಮಿತಿ ರಾಮಾಪುರ ಮತ್ತು ಒಕ್ಕೂಟ ಪದಗ್ರಹಣವನ್ನು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ರಾಮಾಪುರ ವಲಯದ ಸಹಯೋಗದಲ್ಲಿ ಆಯೋಜಿಸಿದ್ದ ಸಾಮೂಹಿಕ ಪೂಜೆ ಮತ್ತು ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಶಾಸಕರು, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಿಗಿಸಿಕೊಳ್ಳುವುದರ ಜೊತೆಗೆ ರಾಜ್ಯಾದ್ಯಂತ ಇರುವ ಗ್ರಾಮೀಣ ಪ್ರದೇಶಗಳ ಅಭಿವೃದ್ದಿಗೆ ತಮ್ಮ ಕೈಲಾದ ಸಹಾಯ ಮಾಡುವ ಮೂಲಕ ಧರ್ಮದ ಅಭಿವೃದ್ದಿ ಮತ್ತು ಸಮಾಜದ ಅಭಿವೃದ್ದಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಎಮ್.ಆರ್ ಮಂಜುನಾಥ್ ಮಹಿಳೆಯರಿಗೆ ಅಡುಗೆ ಒಲೆಯನ್ನು ವಿತರಣೆ ಮಾಡಿದರು. ನಂತರ ನೂತನವಾಗಿ ಆಯ್ಕೆಯಾದ ಪ್ರತಿಯೊಂದು ಗ್ರಾಮದ ಒಕ್ಕೂಟದ ಪದಾಧಿಕಾರಿಗಳು ಪದಗ್ರಹಣ ಮಾಡಿಡಿದರು. ನಂತರ ಮಲೈಮಹದೇಶ್ವರಬೆಟ್ಟ ಸಾಲೂರು ಬೃಹನ್ ಮಠದ ಪಟ್ಟದ ಗುರುಸ್ವಾಮಿಗಳು ಸಭೆಯನ್ನು ಉದ್ದೇಶಿಸಿ ಆರ್ಶಿವಚನವನ್ನು ಮಾಡಿದರು.
ಈ ಸಮಾರಂಭದಲ್ಲಿ ಜಿಪಂ ಸದಸ್ಯ ಬಸವರಾಜು, ಗ್ರಾಪಂ ಅಧ್ಯಕ್ಷೆ ನಲ್ಲಮ್ಮ, ಕೇಂದ್ರೀಯ ಗ್ರಾಮೀಣ ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ , ಪುರುಷೋತ್ತಮ್, ಕಿಸಾನ್ ಸಂಘದ ಅಧ್ಯಕ್ಷರಾದ ರಾಜಣ್ಣ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.