ಸುವರ್ಣ ಸೌಧಕ್ಕೆ ಮುತ್ತಿಗೆ: ರೈತರ ವಿರುದ್ಧ ಜಾಮೀನು ರಹಿತ ಮೊಕದ್ದಮೆ ದಾಖಲು
ಬೆಳಗಾವಿ, ನ.18: ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ರೈತರ ವಿರುದ್ಧ ಜಾಮೀನು ರಹಿತ ಮೊಕದ್ದಮೆ ದಾಖಲಿಸಲಾಗಿದ್ದು, ಸುಮಾರು ಹತ್ತಕ್ಕೂ ಹೆಚ್ಚು ರೈತರನ್ನು ಬಂಧಿಸಲಾಗಿದೆ.
ಪ್ರತಿಭಟನಾನಿರತ ರೈತರ ವಿರುದ್ಧ ಹಿರೇಬಾಗೇವಾಡಿ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸುವರ್ಣ ಸೌಧದ ಗೇಟಿನ ಬೀಗವನ್ನು ಕಲ್ಲಿನಿಂದ ಹೊಡೆದಿರುವುದು, ಟ್ರಾಕ್ಟರ್ಗಳ ಸಮೇತ ಸುವರ್ಣ ಸೌಧದ ಒಳಗೆ ಅಕ್ರಮ ಪ್ರವೇಶ ಮಾಡಿರುವುದರ ಹಿನ್ನೆಲೆಯಲ್ಲಿ ಸೆಕ್ಷನ್ 143, 147, 169ರಡಿಯಲ್ಲಿ ಜಾಮೀನು ರಹಿತ ಮೊಕದ್ದಮೆ ದಾಖಲಿಸಲಾಗಿದೆ.
ಬಿಡಗಡೆಗೆ ಆಗ್ರಹ: ಪ್ರತಿಭಟನಾ ನಿರತ ರೈತರನ್ನು ಬಂಧಿಸಿರುವುದು ಸರಿಯಲ್ಲ. ಹಲವು ದಿನಗಳಿಂದ ಶಾಂತಿಯುತವಾಗಿ ಧರಣಿ ನಡೆಸಿದ್ದು, ರೈತರು ಆಯೋಜಿಸಿದ್ದ ಸಭೆಗೆ ಮುಖ್ಯಮಂತ್ರಿಗಳು ಆಗಮಿಸದೆ ನಂಬಿಕೆ ದ್ರೋಹ ಮಾಡಿದ್ದಾರೆ. ಇದರಿಂದ ರೈತರು ಸಹಜವಾಗಿಯೆ ಆಕ್ರೋಶಗೊಂಡಿದ್ದಾರೆ. ರೈತರ ಬಂಧನದಿಂದ ಸಮಸ್ಯೆಗಳು ತಣ್ಣಗಾಗುವುದಿಲ್ಲ. ಕೂಡಲೆ, ಬಂಧಿತ ರೈತರನ್ನು ಬಿಡುಗಡೆಗೊಳಿಸಿ, ರೈತರೊಂದಿಗೆ ಚರ್ಚೆ ನಡೆಸಿ ಸಮಸ್ಯೆಯನ್ನು ಬಗೆ ಹರಿಸಬೇಕು. ಇಲ್ಲದಿದ್ದರೆ, ರಾಜ್ಯಾದ್ಯಂತ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಎಚ್ಚರಿಕೆ ನೀಡಿದರು.