ಹನೂರು: ಚಂಗಡಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾಧಿಕಾರಿ ಬಿ.ಬಿ ಕಾವೇರಿ
ಹನೂರು,ನ.18: ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಸಮೀಪವಿರುವ ಚಂಗಡಿ ಗ್ರಾಮಕ್ಕೆ ಚಾಮರಾಜನಗರ ಜಿಲ್ಲಾಧಿಕಾರಿ ಬಿ.ಬಿ ಕಾವೇರಿ ಅಧಿಕಾರಿಗಳ ಜೊತೆ ಭೇಟಿ ನೀಡಿ ಪರಿಶೀಲಿಸಿದರು.
ದೂರುಗಳ ಸುರಿಮಳೆ: ಈ ಸಂದರ್ಭ ಮುಂದೆ ಚಂಗಡಿ ಗ್ರಾಮಸ್ಥರು ಕುಡಿಯುವ ನೀರಿನ ಸಮಸ್ಯೆ, ರಸ್ತೆ, ಸಾರಿಗೆ ವ್ಯವಸ್ಥೆ, ವಿದ್ಯುತ್ ಹಾಗೂ ಇನ್ನಿತರ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿ ಬಳಿ ಅವಲತ್ತುಕೊಂಡರು.
ಗ್ರಾಮಸ್ಥರಿಗೆ ಭರವಸೆ: ಗ್ರಾಮ ಪಂ. ವತಿಯಿಂದ ಇಲ್ಲಿರುವ ಗ್ರಾಮಸ್ಥರಿಗೆ ಅಧಿಕಾರಿಗಳು ಕೂಡಲೇ ಶುದ್ಧ ಕುಡಿಯುವ ನೀರು ನೀಡಲು ಕ್ರಮ ವಹಿಸಿ. ಜೊತೆಗೆ ಅಧಿಕಾರಿಗಳ ಜೊತೆ ಚರ್ಚಿಸಿ ರಸ್ತೆ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು. ಸಾರಿಗೆ ಇಲ್ಲದಿರುವುದರಿಂದ ವಾರದಲ್ಲಿ ಮೂರು ದಿನ ಮಿನಿಬಸ್ ವ್ಯವಸ್ಥೆ ಕಲ್ಪಿಸಲಾಗುವುದು. ವೃದ್ಧರು ಮಾಸಿಕ ವೇತನ ಪಡೆಯುವ ಫಲಾನುಭವಿಗಳ ಆಧಾರ್ ಲಿಂಕ್ ಪಡೆದು ಬ್ಯಾಂಕ್ ಖಾತೆ ತೆರೆದು ನಿಮ್ಮ ಖಾತೆಗೆ ನೇರವಾಗಿ ಹಣ ಬರಲು ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ತಾಕೀತು ಮಾಡಿದರು. ಹಾಗೂ ಈ ಕುರಿತು ಸಮಗ್ರವಾಗಿ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಪುನರ್ ವಸತಿ ಯೋಜನೆಯಡಿ ಸೌಲಭ್ಯ ನೀಡುವ ಭರವಸೆ ನೀಡಿದರು.