'ಗಜ' ಚಂಡಮಾರುತ ಎಫೆಕ್ಟ್: ಶಿವಮೊಗ್ಗದ ಹಲವೆಡೆ ಗುಡುಗು ಸಹಿತ ಮಳೆ
ಸಾಂದರ್ಭಿಕ ಚಿತ್ರ
ಶಿವಮೊಗ್ಗ, ನ. 19: ತಮಿಳುನಾಡು ಹಾಗೂ ಪುದುಚೇರಿಗಳಲ್ಲಿ ನಾಗರೀಕರ ಜೀವಹಾನಿ ಸೇರಿದಂತೆ ಭಾರೀ ಪ್ರಮಾಣದ ಆಸ್ತಿಪಾಸ್ತಿಗೆ ಧಕ್ಕೆ ಉಂಟು ಮಾಡಿರುವ 'ಗಜ' ಚಂಡಮಾರುತದ ಪರಿಣಾಮ ಶಿವಮೊಗ್ಗ ಜಿಲ್ಲೆಯ ಮೇಲೂ ಬೀರಿದ್ದು, ಭಾನುವಾರ ಸಂಜೆ ಹಾಗೂ ರಾತ್ರಿ ಹಲವೆಡೆ ಸಿಡಿಲು ಸಹಿತ ಮಳೆಯಾಗಿದೆ.
ಇನ್ನೊಂದೆಡೆ ಭಾನುವಾರ ಸಂಜೆ ಸೊರಬ ತಾಲೂಕಿನ ಗುಡ್ಡೆಕೊಪ್ಪ ಗ್ರಾಮದಲ್ಲಿ ಸಿಡಿಲು ಬಡಿದು 300 ಕ್ಕೂ ಅಧಿಕ ಕುರಿಗಳು ಮೃತಪಟ್ಟಿದ್ದು, ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಕೆಲವೆಡೆ ಕೊಯ್ಲು ಮಾಡಿ ಹಸನು ಮಾಡಲು ಹಾಕಿದ್ದ ಬತ್ತ, ಮೆಕ್ಕೆಜೋಳ ಬೆಳೆಯು ಮಳೆಯಿಂದ ನೆನೆದು ಹಾನಿಗೀಡಾದ ಮಾಹಿತಿಗಳು ಬಂದಿವೆ.
ಸೋಮವಾರ ಕೂಡ ಜಿಲ್ಲೆಯ ಹಲವೆಡೆ ಮೋಡಕವಿದ ವಾತಾವರಣ ಮನೆ ಮಾಡಿತ್ತು. ಕಳೆದ ರಾತ್ರಿ ಮಳೆಗೆ ಸಾಕ್ಷಿಯಾಗಿದ್ದ ಶಿವಮೊಗ್ಗ ನಗರದಲ್ಲಿ ಸೋಮವಾರ ಬೆಳಿಗ್ಗೆ ಮೋಡ ಕವಿದ ವಾತಾವರಣ ಮುಂದುವರಿದಿತ್ತು. ತದನಂತರ ಮಳೆ ಮೋಡ ಮರೆಯಾಗಿ ಬಿಸಿಲು ಬೀಳಲಾರಂಭಿಸಿತು.
ಕುರಿಗಳ ಸಾವು: ಸೊರಬ ತಾಲೂಕಿನ ಗುಡ್ಡೆಕೊಪ್ಪ ಗ್ರಾಮದಲ್ಲಿ ಸಿಡಿಲು ಬಡಿದು ಮೃತಪಟ್ಟ ಕುರಿಗಳು, ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಕಡಕ್ಲಾತ್ ಗ್ರಾಮದ ಕಲ್ಲಪ್ಪ ಎಂಬುವರಿಗೆ ಸೇರಿದ್ದಾಗಿವೆ. ಇತ್ತೀಚೆಗೆ ಅವರು ಕುಟುಂಬ ಸದಸ್ಯರೊಂದಿಗೆ ಗುಡ್ಡೇಕೊಪ್ಪ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕುರಿಗಳೊಂದಿಗೆ ಬೀಡುಬಿಟ್ಟಿದ್ದರು.
ಎಂದಿನಂತೆ ಕುರಿಗಳನ್ನು ಮೇಯಿಸಿಕೊಂಡು ಹಿಂದಿರುಗುವಾಗ ಮಳೆ ಶುರುವಾಗಿದ್ದು, ಕುರಿಗಳು ಮರವೊಂದರ ಕೆಳಗಡೆ ನಿಂತುಕೊಂಡಿದ್ದವು. ಈ ವೇಳೆ ಕುರಿಗಳು ನಿಂತುಕೊಂಡಿದ್ದ ಮರಕ್ಕೆ ಸಿಡಿಲು ಬಡಿದಿದ್ದು, ಸುಮಾರು 300 ಕುರಿಗಳು ಸ್ಥಳದಲ್ಲಿಯೇ ಮೃತಪಟ್ಟಿವೆ. ಇನ್ನೂ ಹಲವು ಕುರಿಗಳ ಸ್ಥಿತಿ ಗಂಭೀರವಾಗಿದೆ.
ಕಲ್ಲಪ್ಪ ಮತ್ತವರ ಕುಟುಂಬ ಸದಸ್ಯರು ಮರದಿಂದ ಕೊಂಚ ದೂರದಲ್ಲಿ ನಿಂತುಕೊಂಡಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಕುರಿಗಳು ಸಾವನ್ನಪ್ಪಿವೆ. ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ಸ್ಥಳೀಯ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಬೆಳೆಗಳಿಗೆ ಹಾನಿ: ಸದ್ಯ ಜಿಲ್ಲೆಯಾದ್ಯಂತ ಬತ್ತ, ಮೆಕ್ಕೆಜೋಳ ಹಸನು ಕಾರ್ಯ ಭರದಿಂದ ನಡೆಯುತ್ತಿದೆ. ಆದರೆ ದಿಢೀರ್ ಬಿದ್ದ ಮಳೆಯಿಂದ ಕೊಯ್ಲು ಮಾಡಿದ್ದ ಬೆಳೆಗಳು ಮಳೆಯಲ್ಲಿ ನೆನೆಯುವಂತಾಗಿದೆ. ಅಡಕೆ ಒಣಗಿಸುವ ಪ್ರಕ್ರಿಯೆಯೂ ಸ್ಥಗಿತಗೊಳ್ಳುವಂತಾಗಿದೆ.
ಒತ್ತಡದ ವಾತಾವರಣ: ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿದ್ದ 'ಗಜ' ಚಂಡಮಾರುತವು ಸದ್ಯ ಅರಬ್ಬಿ ಸಮುದ್ರದ ಆಗ್ನೇಯ ಭಾಗಕ್ಕೆ ಹೋಗಿದ್ದು, ಒತ್ತಡದ ವಾತಾವರಣ ನಿರ್ಮಾಣವಾಗಿದೆ. ಇದರಿಂದಾಗಿ ರಾಜ್ಯದ ಹಲವೆಡೆ ಗುಡುಗು, ಗಾಳಿ ಸಹಿತ ಮಳೆಯಾಗುತ್ತಿದೆ ಎಂದು ಹವಾಮಾನ ಇಲಾಖೆಯ ಮೂಲಗಳು ಮಾಹಿತಿ ನೀಡುತ್ತವೆ.