ಮೈಸೂರು: ವಿಚಾರಣಾಧೀನ ಕೈದಿ ಹೃದಯಾಘಾತದಿಂದ ಸಾವು; ಕುಟುಂಬಸ್ಥರ ಪ್ರತಿಭಟನೆ
ಮೈಸೂರು,ನ.20: ಮೈಸುರು ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧಿನ ಖೈದಿಯೋರ್ವ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ನಡೆದಿದೆ.
ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ಮೈಸೂರಿನ ಕನಕಗಿರಿಯ ನಿವಾಸಿ ಮಲ್ಲೇಶ್ ಜೈಲು ಸೇರಿದ್ದ. ನಿನ್ನೆ ರಾತ್ರಿ ಆತನಿಗೆ ಎದೆನೋವು ಕಾಣಿಸಕೊಂಡಿದೆ. ಕೂಡಲೇ ಆತನನ್ನು ಕೆ.ಆರ್.ಆಸ್ಪತ್ರೆಗೆ ಚಿಕಿತ್ಸೆಗೆಂದು ಸೇರಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಮಲ್ಲೇಶ್ (49) ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಕುಟುಂಬದವರ ಪ್ರತಿಭಟನೆ: ಮೃತ ಮಲ್ಲೇಶ್ನ ಮೃತದೇಹವನ್ನು ಮರೋತ್ತರ ಪರೀಕ್ಷೆಗಾಗಿ ಕೆ.ಆರ್.ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿತ್ತು. ವಿಷಯ ತಿಳಿದ ಕುಟುಂಬದವರು ಶವಾಗಾರದ ಮುಂದೆ ಇದು ಸಹಜ ಸಾವಲ್ಲ. ಪೊಲಿಸರೇ ಏನೋ ಮಾಡಿದ್ದಾರೆ ಎಂದು ಆರೋಪಿಸಿ ಪ್ರತಿಭಟಿಸಿದರು.
ಮೃತ ವ್ಯಕ್ತಿ ಆರೋಗ್ಯವಾಗಿದ್ದು, ಆತನಿಗೆ ಯಾವುದೇ ಹೃದಯ ಸಂಬಂಧಿ ಕಾಯಿಲೆ ಇರಲಿಲ್ಲ. ಪೊಲೀಸರೇ ಏನೋ ಮಾಡಿದ್ದಾರೆ. ಈ ಸಾವಿನ ಹಿಂದೆ ನಮಗೆ ಅನುಮಾವಿದೆ ಎಂದು ಆರೋಪಿಸಿದರು. ನಂತರ ಹಿರಿಯ ಪೊಲೀಸ್ ಅಧಿಕಾರಿಗಳು ಮರಣೋತ್ತರ ಪರೀಕ್ಷೆಯ ನಂತರ ಯಾವ ರೀತಿ ಸಾವನ್ನಪ್ಪಿದ್ದಾನೆ ಎಂಬುದು ತಿಳಿಯುತ್ತದೆ. ದಯವಿಟ್ಟು ಸಹಕರಿಸಿ ಎಂದು ಮನವಿ ಮಾಡಿದರು. ನಂತರ ಪ್ರತಿಭಟನೆ ಕೈಬಿಟ್ಟರು.