ಹನೂರು: ಇ-ಸ್ವತ್ತು ಖಾತಾ ಅಭಿಯಾನದ ಗ್ರಾಮ ಸಭೆ
ಹನೂರು,ನ.20: ಗ್ರಾಮೀಣ ಪ್ರದೇಶದಲ್ಲಿ ಪ್ರತಿಯೊಬ್ಬರಿಗೂ ಉದ್ಯೋಗ ಖಾತರಿ ಯೋಜನೆಯಲ್ಲಿ ಉದ್ಯೋಗ ನೀಡಲು ಸಹಭಾಗಿತ್ವ ಯೋಜನೆ ತಯಾರಿಸುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹುತ್ತೂರು ಪಿಡಿಒ ಕೆ.ಎ.ಕುರಬರ ತಿಳಿಸಿದರು.
ತಾಲೂಕಿನ ಹುತ್ತೂರು ಗ್ರಾಪಂ ವ್ಯಾಪ್ತಿಯಲ್ಲಿ ಮಂಗಳವಾರ ನಮ್ಮ ಗ್ರಾಮ ನಮ್ಮ ಯೋಜನೆ ಮತ್ತು ಇ-ಸ್ವತ್ತು ಖಾತಾ ಅಭಿಯಾನದ ಗ್ರಾಮ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಗ್ರಾಮದ ರೈತರು, ಕೂಲಿ ಕಾರ್ಮಿಕರು ಮತ್ತು ಮಹಿಳೆಯರು ಗ್ರಾಮದ ಅಭಿವೃದ್ದಿಗೆ ಪೂರಕವಾದಂತಹ ಕಾಮಗಾರಿಗಳನ್ನು ಪಟ್ಟಿಮಾಡಿ ಸಭೆಯಲ್ಲಿ ತಿಳಿಸಿದರೆ ಅನಂತರ ಈ ಕ್ರಿಯಾ ಯೋಜನೆಯಲ್ಲಿ ಸೇರಿಸಬಹುದು ಎಂದರು.
ಈ ಸಭೆಯಲ್ಲಿ ಹಲವು ಮಹಿಳೆಯರು ಕುಡಿಯುವ ನೀರು, ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಬಸವಣ್ಣ, ಉಪಾದ್ಯಕ್ಷೆ ಶಾಂತಿ, ನೋಡಲ್ ಅಧಿಕಾರಿ ಕೃಷ್ಣನಾಯಕ್, ಕಂದಾಯ ವಸೂಲಿಗಾರ ಪ್ರಕಾಶ್ ಸೇರಿದಂತೆ ಮುಖಂಡ ಮಹೇಶ್ ಕುಮಾರ್ ಇನ್ನಿತರರು ಹಾಜರಿದ್ದರು.