ಶಿವಮೊಗ್ಗದಲ್ಲಿ ಸಂಭ್ರಮದ ಈದ್ ಮಿಲಾದ್ ಆಚರಣೆ
ಶಿವಮೊಗ್ಗ, ನ. 21: ಮಹಾನ್ ಮಾನವತವಾದಿ ಪ್ರವಾದಿ ಮಹಮ್ಮದ್ ಪೈಗಂಬರ್ ರವರ ಜನ್ಮ ದಿನಾಚರಣೆಯ ಈದ್ ಮಿಲಾದ್ ಹಬ್ಬದ ಅಂಗವಾಗಿ, ಬುಧವಾರ ಶಿವಮೊಗ್ಗ ನಗರದಲ್ಲಿ ಮುಸ್ಲಿಂ ಬಾಂಧವರು ಅದ್ದೂರಿ ಮೆರವಣಿಗೆ ನಡೆಸಿದರು. ಸಹಸ್ರಾರು ಜನರು ಭಾಗವಹಿಸಿದ್ದರು.
ಮಧ್ಯಾಹ್ನ ಗಾಂಧಿ ಬಜಾರ್ ರಸ್ತೆಯ ಜಾಮೀಯ ಮಸೀದಿ ಆವರಣದಿಂದ ವಿಧ್ಯುಕ್ತವಾಗಿ ಮೆರವಣಿಗೆ ಆರಂಭವಾಯಿತು. ಮೆರವಣಿಗೆಯು ಗಾಂಧಿಬಜಾರ್ 2 ನೇ ಕ್ರಾಸ್, ಲಷ್ಕರ್ ಮೊಹಲ್ಲಾ ಮುಖ್ಯರಸ್ತೆಯು ಮುಖಾಂತರ ಸಾಗಿ ಪೆನ್ಷನ್ ಮೊಹಲ್ಲಾ, ಬಿ.ಹೆಚ್.ರಸ್ತೆ, ಮೀನಾಕ್ಷಿ ಭವನ, ಟ್ಯಾಂಕ್ ಮೊಹಲ್ಲಾ, ಬಾಲರಾಜ್ ಅರಸ್ ರಸ್ತೆ, ಮಹಾವೀರ ವೃತ್ತ, ಗೋಪಿ ವೃತ್ತ, ನೆಹರು ರಸ್ತೆ, ಅಮೀರ್ ಅಹಮದ್ ಸರ್ಕಲ್, ಅಶೋಕ ರಸ್ತೆ ಮುಖಾಂತರ ನ್ಯೂ ಮಂಡ್ಲಿ ತಲುಪಿತು. ಮೆರವಣಿಗೆ ಪೂರ್ಣಗೊಳ್ಳುವ ವೇಳೆಗೆ ಸಂಜೆ ಸಮೀಪಿಸಿತ್ತು.
ಮೆರವಣಿಗೆಯಲ್ಲಿ ವಯೋಬೇಧವಿಲ್ಲದ ಸಹಸ್ರಾರು ಜನರು ಭಾಗವಹಿಸಿದ್ದರು. ಪವಿತ್ರ ಕ್ಷೇತ್ರಗಳಾದ ಮಕ್ಕಾ, ಮದೀನ ಪ್ರತಿಕೃತಿಗಳು ಗಮನ ಸೆಳೆದವು. ಹಸಿರು ಬಾವುಟಗಳು ರಾರಾಜಿಸುತ್ತಿದ್ದವು. ಧ್ವನಿವರ್ಧಕಗಳಲ್ಲಿ ಧಾರ್ಮಿಕ ಗೀತೆಗಳ ಗಾಯನ ಕೇಳಿಬರುತ್ತಿತತು.
ಮೆರವಣಿಗೆ ವೀಕ್ಷಿಸಲು ರಸ್ತೆ, ವೃತ್ತಗಳಲ್ಲಿ ನೂರಾರು ಮುಸ್ಲಿಂ ಮಹಿಳೆಯರು ನಿಂತುಕೊಂಡಿದ್ದ ದೃಶ್ಯ ಸರ್ವೇಸಾಮಾನ್ಯವಾಗಿತ್ತು. ಮೆರವಣಿಗೆ ಹಾದು ಹೋಗುವ ಕೆಲ ಮಾರ್ಗಗಳನ್ನು ಬಂಟಿಂಗ್ಸ್, ಬ್ಯಾನರ್ ಗಳಿಂದ ಶೃಂಗರಿಸಲಾಗಿತ್ತು. ಮೆರವಣಿಗೆಯಲ್ಲಿ ಭಾಗವಹಿಸಿದ್ದವರಿಗೆ ಸಿಹಿ ತಿನಿಸು, ಕುಡಿಯುವ ನೀರು, ತಂಪು ಪಾನೀಯಗಳ ವಿತರಣೆಯನ್ನು ಕೆಲವೆಡೆ ಮಾಡಲಾಯಿತು.
ಮಾರ್ಗ ಬದಲಾವಣೆ: ಈದ್ ಮಿಲಾದ್ ಮೆರವಣಿಗೆಯ ಹಿನ್ನೆಲೆಯಲ್ಲಿ, ಮೆರವಣಿಗೆ ಹಾದು ಹೋಗುವ ರಸ್ತೆ ಹಾಗೂ ಸಮಾನಂತರ ರಸ್ತೆಗಳಲ್ಲಿ ವಾಹನ ಸಂಚಾರ ಬದಲಾಯಿಸಲಾಗಿತ್ತು. ಬದಲಿ ರಸ್ತೆಗಳ ಮೂಲಕ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು.
ಬಿಗಿ ಪಹರೆ: ಮುನ್ನೆಚ್ಚರಿಕೆ ಕ್ರವಾಗಿ ಮೆರವಣಿಗೆಗೆ ಬಿಗಿ ಪೊಲೀಸ್ ಪಹರೆ ಹಾಕಲಾಗಿತ್ತು. ಮೆರವಣಿಗೆ ಸಾಗುವ ರಸ್ತೆಗಳಲ್ಲಿ ವ್ಯಾಪಕ ಕಟ್ಟೆಚ್ಚರ ವಹಿಸಲಾಗಿತ್ತು. ಆಯಕಟ್ಟಿನ ಸ್ಥಳಗಳಲ್ಲಿ ಭದ್ರತೆ ವ್ಯವಸ್ಥೆ ಹೆಚ್ಚಿಸಲಾಗಿತ್ತು. ನಗರಾದ್ಯಂತ ಗಸ್ತು ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿತ್ತು.