ನಾನು ಏನು ಮಾತನಾಡಿದರೂ ತಪ್ಪು : ಸಿಎಂ ಕುಮಾರಸ್ವಾಮಿ
ಬೆಂಗಳೂರು, ನ.22: ನಾನು ಏನು ಮಾತನಾಡಿದರೂ ತಪ್ಪು. ಯಾವ ಪದ ಬಳಕೆ ಮಾಡಿದರೂ ಅದನ್ನು ಬೇರೆ ರೀತಿ ಅರ್ಥಮಾಡಿಕೊಳ್ಳುತ್ತಾರೆ ಎಂದು ಮುಖ್ಯ ಮಂತ್ರಿ ಎಚ್ ಡಿ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ಬಡವರ ಬಂಧು ಯೋಜನೆಗೆ ಚಾಲನೆ ನೀಡಿ ಮಾತನಾಡಿ ನಾನು ಏನು ಮಾಡಿದರೂ ತಪ್ಪು. ಹಳದಿ ಕಣ್ಣಿನಿಂದ ನೋಡ್ತಾರೆ. ಆದರೆ ನಾನು ಮಾಡಿದ ಒಳ್ಲೆಯ ಕೆಲಸ ಕಾಣಿಸಲ್ಲ. ರಾಜ್ಯದಲ್ಲಿ ರೈತರು ಮಾರಾಟ ಮಾಡಿದ ಕಬ್ಬಿನ ಹಳೆ ಬಾಕಿ ವಿಚಾರದಲ್ಲಿ ನನ್ನ ಮೇಲೆ ಗೂಬೆ ಕೂರಿಸಲಾಗಿದೆ. ನಾನು ರೈತರಿಗಾಗಿ ಹುಟ್ಟಿದ್ದೇನೆ. ರೈತರಿಗಾಗಿ ಸಾಯಲು ಬಯಸುವೆನು ಎಂದು ಹೇಳಿದರು.
ಬುರುಡೆ ಸರಕಾರ ಎಂದು ಯಡಿಯೂರಪ್ಪ ಹೇಳ್ತಾರೆ. ನಾನು ನಿಮ್ಮಿಂದ ಕಲಿಯಬೇಕಾಗಿಲ್ಲ. ಪಲಾಯಾನ ಮಾಡೋದಲ್ಲ. ಬನ್ನಿ ಬೆಳಗಾವಿ ಅಧಿವೇಶನಕ್ಕೆ ಅಲ್ಲೇ ಚರ್ಚೆ ಮಾಡೋಣ. ಮೂರು ವರ್ಷ ನಿಮ್ಮ ಸರಕಾರ ಏನು ಮಾಡಿದೆಂದು ಹೇಳಿ ಎಂದು ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪ ಅವರಿಗೆ ಸವಾಲು ಹಾಕಿದರು.
ಮುಖ್ಯ ಮಂತ್ರಿ ಹುದ್ದೆ ನನಗೆ ಶಾಶ್ವತವಲ್ಲ. ಎಲ್ಲಿಯವರೆಗೆ ಬೆಂಬಲವಿರುತ್ತೋ ಅಲ್ಲಿಯ ವರೆಗೆ ಮುಖ್ಯ ಮಂತ್ರಿಯಾಗಿ ಇರುತ್ತೇನೆ ಎಂದರು.
ಇನ್ಮುಂದೆ ಸುದ್ದಿಗೋಷ್ಠಿ ಮಾಡಲ್ಲ. ವೇದಿಕೆಗಳಲ್ಲಿ ಮಾತ್ರ ಮಾತನಾಡುತ್ತೇನೆ. ಮಾಧ್ಯಮಗಳಿಗೂ ಹೇಳಿಕೆ ನೀಡುವುದಿಲ್ಲ. ಗೃಹ ಕಚೇರಿಗೆ ಮಾಧ್ಯಮದವರನ್ನು ಬಿಡಬೇಡಿ ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.