ಚಿಕ್ಕಮಗಳೂರು: ಅಳಿವಿನಂಚಿನ ಹಾರುವ ಬೆಕ್ಕು ರಕ್ಷಣೆ
ಚಿಕ್ಕಮಗಳೂರು, ನ.22: ಅಳಿವಿನಂಚಿನಲ್ಲಿರುವ ಹಾರುವ ಬೆಕ್ಕೊಂದು ಜಿಲ್ಲೆಯ ಕೊಪ್ಪ ತಾಲೂಕಿನ ಕೊಠರ್ಡಿ ಎಸ್ಟೇಟ್ ಬಳಿ ಗುರುವಾರ ಬೆಳಗ್ಗೆ ಕಾಣಿಸಿಕೊಂಡಿದೆ.
ಹಾರುವ ಬೆಕ್ಕುಗಳ ಸಂತತಿ ನಶಿಸುತ್ತಿದ್ದು, ಇತ್ತೀಚೆಗೆ ಮಲೆನಾಡಿನ ಯಾವುದೇ ಭಾಗದಲ್ಲಿ ಕಾಣಿಸಿಕೊಂಡ ಉದಾಹರಣೆ ಇಲ್ಲ. ಹಾರುವ ಬೆಕ್ಕು ಇದೀಗ ಮಲೆನಾಡು ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿದ್ದು, ಮಲೆನಾಡಿನ ಜನತೆಯಲ್ಲಿ ಖುಷಿ ಉಂಟು ಮಾಡಿದೆ.
ಕೊಪ್ಪ ತಾಲೂಕಿನ ಜಯಪುರ ಬಳಿಯ ಕೊಠರ್ಡಿ ಎಸ್ಟೇಟ್ ಬಳಿ ಎಸ್ಟೇಟ್ ನಿರ್ಮಿಸಿದ್ದ ತಂತಿಬೇಲಿಗೆ ಹಾರುವ ಬೆಕ್ಕಿನ ರೆಕ್ಕೆ ಸಿಲುಕಿಕೊಂಡು ನರಳಾಟ ಅನುಭವಿಸುತ್ತಿತ್ತು. ಇದನ್ನು ಗಮನಿಸಿದ ದಾರಿಹೋಕರು ಹಾರುವ ಬೆಕ್ಕನ್ನು ರಕ್ಷಿಸಿ ಅರಣ್ಯಕ್ಕೆ ಬಿಟ್ಟಿದ್ದಾರೆ. ಮಲೆನಾಡಿನ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಾರುವ ಬೆಕ್ಕು ಸಂತತಿ ಇತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಹಾರುವ ಬೆಕ್ಕಿನ ಸಂತತಿ ಕಡಿಮೆಯಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಹಾರುವ ಬೆಕ್ಕು ಕಾಣಿಸಿಕೊಂಡ ಉದಾಹರಣೆ ಇಲ್ಲ. ಎಸ್ಟೇಟ್ ಪಕ್ಕದ ದಾರಿಯಲ್ಲಿ ವಾಹನ ಸಂಚಾರದಿಂದ ಗಾಬರಿಯಿಂದ ಹಾರಲಾಗದೆ ತಂತಿಬೇಲಿಗೆ ಹಾರುವ ಬೆಕ್ಕು ಸಿಲುಕಿಕೊಂಡಿದೆ. ತಂತಿಬೇಲಿಯಿಂದ ತಪ್ಪಿಸಿ ರಕ್ಷಿಸಲಾಗಿದೆ ಎಂದು ಸ್ಥಳೀಯರು ಪತ್ರಿಕೆಗೆ ತಿಳಿಸಿದರು.