ಶಿವಮೊಗ್ಗ : ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ವಿಧಾನ ಪರಿಷತ್ ಸದಸ್ಯ ಮೀರ್ ಅಝೀಝ್ ಅಹ್ಮದ್ ನಿಧನ
ಶಿವಮೊಗ್ಗ, ನ. 30: ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ವಿಧಾನ ಪರಿಷತ್ ಸದಸ್ಯ ಮೀರ್ ಅಝೀಝ್ ಅಹ್ಮದ್ ಅವರು ಅಲ್ಪ ಕಾಲದ ಅಸೌಖ್ಯದ ಬಳಿಕ ಶುಕ್ರವಾರ ಮುಂಜಾನೆ ಇಲ್ಲಿನ ತಮ್ಮ ಸ್ವಗೃಹದಲ್ಲಿ ನಿಧನರಾದರು.
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ನಿನ್ನೆಯಷ್ಟೇ ಮನೆಗೆ ಮರಳಿದ್ದರು. ಅವರಿಗೆ ಸುಮಾರು 84 ವರ್ಷ ವಯಸ್ಸಾಗಿತ್ತು.
ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರಾಗಿ ಪಕ್ಷದ ಪ್ರಮುಖ ನಾಯಕರಾಗಿ ಬೆಳೆದಿದ್ದ ಮೀರ್ ಅಝೀಝ್ ಅವರು ರಾಜ್ಯ ಅಲ್ಪ ಸಂಖ್ಯಾತರ ಆಯೋಗದ ಅಧ್ಯಕ್ಷರಾಗಿ, ಶಿವಮೊಗ್ಗ ವಕ್ಫ್ ಕಮಿಟಿಯ ಜಿಲ್ಲಾಧ್ಯಕ್ಷರಾಗಿ, ಕರ್ನಾಟಕ ರಾಜ್ಯ ನಿರ್ಮಾಣ ನಿಗಮದ ಅಧ್ಯಕ್ಷರಾಗಿ, ಕರ್ನಾಟಕ ಕುರಿ ಮತ್ತು ಉಣ್ಣೆ ನಿಗಮದ ನಿರ್ದೇಶಕರಾಗಿ, ಶಿವಮೊಗ್ಗ ನಗರಸಭೆಯ ಸ್ಥಾಯೀ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಮೃತರು ಇಬ್ಬರು ಪುತ್ರರು, ಓರ್ವ ಪುತ್ರಿ, ಸಹೋದರರು ಹಾಗು ಬಂಧು ಬಳಗ, ಅಭಿಮಾನಿಗಳನ್ನು ಅಗಲಿದ್ದಾರೆ.
ಮೃತರ ಜನಾಝ ನಮಾಝ್ ಇಂದು ಅಸರ್ ನಮಾಝ್ ನಂತರ ಶಿವಮೊಗ್ಗದ ಗಾಂಧಿ ಬಝಾರ್ ಜಾಮಿಯಾ ಮಸ್ಜಿದ್ ನಲ್ಲಿ ನಡೆಯಲಿದೆ. ಬಳಿಕ ಬಸ್ ಸ್ಟ್ಯಾಂಡ್ ಸಮೀಪದ ಸುನ್ನಿ ಖಬರಸ್ತಾನದಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಅವರ ಪುತ್ರರಾದ ಮೀರ್ ಶಬೀರ್ ಅಹ್ಮದ್ ಹಾಗು ಮೀರ್ ಅನೀಸ್ ಅಹ್ಮದ್ ತಿಳಿಸಿದ್ದಾರೆ.