ಲೋಕಸಭೆ ಚುನಾವಣೆಯಲ್ಲೂ ಜೆಡಿಎಸ್-ಕಾಂಗ್ರೆಸ್ ಹೊಂದಾಣಿಕೆ: ಆರ್.ವಿ.ದೇಶಪಾಂಡೆ
ಧಾರವಾಡ, ಡಿ.2: ಜೆಡಿಎಸ್-ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡು ಲೋಕಸಭಾ ಚುಣಾವಣೆ ಎದುರಿಸುತ್ತೇವೆ ಎಂದು ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ತಿಳಿಸಿದ್ದಾರೆ.
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ಚುಣಾವಣೆಯಲ್ಲಿ ಹೊಂದಾಣಿಕೆ ಮಾಡಿದ ರೀತಿಯಲ್ಲಿಯೇ ಮಾಡುತ್ತೇವೆ. ಎಲ್ಲೆಲ್ಲಿ ಯಾವ್ಯಾವ ಪಕ್ಷದ ಅಭ್ಯರ್ಥಿ ನಿಲ್ಲಿಸಬೇಕೆಂಬುದರ ಬಗ್ಗೆ ತೀರ್ಮಾನ ಮಾಡುತ್ತೇವೆ. ಬೆಳಗಾವಿಯ ಅಧಿವೇಶನಕ್ಕೂ ಮೊದಲು ಸಭೆ ಮಾಡುತ್ತೇವೆ ಎಂದರು.
ಕಲಬುರಗಿ ಹತ್ಯೆ ತನಿಖೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸರಕಾರಕ್ಕೆ ಸುಪ್ರೀಂ ಕೋರ್ಟ್ ವರದಿ ಕೇಳಿದೆ. ತಕ್ಷಣ ವರದಿ ಕೊಡುತ್ತೇವೆ. ಅದು ವಿಳಂಬ ಆಗಬಾರದಿತ್ತು. ಸರಕಾರ ಸಾಕಷ್ಟು ಪ್ರಯತ್ನ ಮಾಡುತ್ತಿದೆ ಎಂದರು.
ಡಿಕೆಶಿ-ಜಾರಕಿಹೊಳಿ ನಡುವೆ ಯಾವುದೇ ಗುದ್ದಾಟವಿಲ್ಲ. ಅವರಿಬ್ಬರೂ ಆತ್ಮೀಯ ಗೆಳೆಯರು. ನಿಮಗೆ ಮಾತ್ರ ಹಾಗೆ ಕಾಣಿಸುತ್ತಿದೆ ಎಂದು ಮಾಧ್ಯಮದವರತ್ತಲೇ ಬೆರಳು ಮಾಡಿದರು.
ಜಿಲ್ಲಾಧಿಕಾರಿಯೊಂದಿಗೆ ಮಾತುಕತೆ: ನಗರದಲ್ಲಿರುವ ತಮ್ಮ ಕಚೇರಿಯಲ್ಲಿ ಅಹವಾಲು ಸ್ವೀಕರಿಸಲು ಆಗಮಿಸಿದ ಸಚಿವ ಆರ್.ವಿ. ದೇಶಪಾಂಡೆ, ಜಿಲ್ಲಾಧಿಕಾರಿ ದೀಪಾ ಚೋಳನ್ ಅವರೊಂದಿಗೆ ಮಾತುಕತೆ ನಡೆಸಿ, ಧಾರವಾಡದಲ್ಲಿ ಜರುಗುವ ಸಾಹಿತ್ಯ ಸಮ್ಮೇಳನದ ತಯಾರಿ ಕುರಿತು ಸಭೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.