ಮೈಸೂರು: ಕೆಪಿಎಸ್ಸಿ ನೇಮಕಾತಿಯಲ್ಲಿ ಅನುಸರಿಸಿರುವ ಕ್ರಮ ಖಂಡಿಸಿ ಮೌನ ಪ್ರತಿಭಟನೆ
ಮೈಸೂರು,ಡಿ.5: ಕರ್ನಾಟಕ ಲೋಕಸೇವಾ ಆಯೋಗ ಕೆಪಿಎಸ್ಸಿಯಲ್ಲಿ ಎಸ್ಸಿ,ಎಸ್ಟಿ ಮತ್ತು ಹಿಂದುಳಿದ ವರ್ಗಗಳ ನೇಮಕಾತಿಯಲ್ಲಿ ಅನುಸರಿಸಿರುವ ಮಾರ್ಗಸೂಚಿಯನ್ನು ವಿರೋಧಿಸಿ ಬುಧವಾರ ಮೌನ ಪ್ರತಿಭಟನೆ ನಡೆಸಲಾಯಿತು.
ಮೈಸೂರು-ನಂಜನಗೂಡು ರಸ್ತೆಯಲ್ಲಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಮಾಧಿಗೆ ಪುಷ್ಪಾರ್ಚನೆ ಮಾಡಿ ಪ್ರತಿಭಟನೆ ನಡೆಸಿದರು.
ಕರ್ನಾಟಕ ಲೋಕಸೇವಾ ಆಯೋಗ ಕೆಪಿಎಸ್ಸಿ ನೇಮಕಾತಿಯಲ್ಲಿ ಸರ್ಕಾರ ಅನುಸರಿಸಿರುವ ಮೀಸಲಾತಿಯನ್ನು ವಿರೋಧಿಸಿ ಪ.ಜಾತಿ/ಪ.ಪಂಗಡ ಹಾಗೂ ಹಿಂದುಳಿದ ವರ್ಗಗಳ ಹಕ್ಕುಗಳನ್ನು ಕಿತ್ತುಕೊಳ್ಳಲು ಮುಂದಾಗಿರುವ ಸರ್ಕಾರದ ಆದೇಶವನ್ನು ವಿರೋಧಿಸಿದರು.
ಈ ಸಂದರ್ಭ ಮಾತನಾಡಿದ ಪ್ರತಿಭಟನಾಕಾರರು ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿಗಳಲ್ಲಿ ಸರ್ಕಾರದ ಆದೇಶ 1995ರ ಮೀಸಲಾತಿ ಅನುಪಾತ ಪಾಲನೆಯ ಆದೇಶ ಮುಂದುವರಿಯಬೇಕು. ಮೀಸಲಾತಿ ಹಕ್ಕುಗಳನ್ನು ಕಿತ್ತುಕೊಳ್ಳುವ ಸರ್ಕಾರಿ ಆದೇಶವನ್ನು ಕೂಡಲೇ ಹಿಂಪಡೆಯಬೇಕೆಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ, ಅರಸು ಮಹಾ ಸಭಾ ಜಿಲ್ಲಾ ವಿಶ್ವಕರ್ಮಮಂಡಲ, ಸಂಶೋಧನಾ ವಿದ್ಯಾರ್ಥಿಗಳ ಸಂಘ ಬಿವಿಎಸ್ ಮೈಸೂರು ವಿವಿ, ಜಿಲ್ಲಾ ಉಪ್ಪಾರರ ಸಂಘ, ಜಿಲ್ಲಾ ಕುಂಬಾರರ ಸಂಘ, ಜಿಲ್ಲಾ ಸವಿತಾ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ಸಾಹಿತಿ ಮತ್ತು ಚಿಂತಕರಾದ ಪ್ರೊ.ಕೆ.ಎಸ್,ಭಗವಾನ್, ಕೆ.ಎಸ್.ಶಿವರಾಮು, ಮಾಜಿ ವಿಧಾನಪರಿಷತ್ ಸದಸ್ಯ ಕೆ.ಸಿ.ಪುಟ್ಟಸಿದ್ದಶೆಟ್ಟಿ, ನಗರಪಾಲಿಕೆ ಸದಸ್ಯ ಹೆಚ್.ಎಸ್.ಪ್ರಕಾಶ್, ನಂದೀಶ್ ಅರಸ್, ಚಿಕ್ಕಸ್ವಾಮಿ, ಚಂದ್ರಶೇಖರ್,ವಿನೋದ್ ಕುಮಾರ್, ಸಿ.ಟಿ.ಆಚಾರ್ಯ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.