ಸಕಲ ಸರಕಾರಿ ಗೌರವಗಳೊಂದಿಗೆ ಸ್ವಾತಂತ್ರ್ಯ ಹೋರಾಟಗಾರ ಎನ್.ವಿ.ಕೃಷ್ಣಮಾಚಾರಿ ಅಂತ್ಯಕ್ರಿಯೆ
ಬಾಗೇಪಲ್ಲಿ,ಡಿ.7: ಬುಧವಾರ ಬೆಂಗಳೂರಿನಲ್ಲಿ ನಿಧನರಾದ ಸ್ವಾತಂತ್ರ್ಯ ಹೋರಾಟಗಾರ ಎನ್.ವಿ.ಕೃಷ್ಣಮಾಚಾರಿ ಅಂತ್ಯ ಸಂಸ್ಕಾರ ಪಟ್ಟಣದ ಚಿತ್ರಾವತಿ ನದಿಯ ಬಳಿಯ ರುದ್ರಭೂಮಿಯಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ನೆರವೇರಿತು.
ಗುರುವಾರ ರಾತ್ರಿ ಪಟ್ಟಣದ ಭಜನ ಮಂದಿರ ರಸ್ತೆಯಲ್ಲಿರುವ ಸ್ವಗೃಹದಲ್ಲಿ ಸಾರ್ವಜನಿಕ ದರ್ಶನಕ್ಕೆ ಪಾರ್ಥಿವ ಶವವನ್ನು ಇಡಲಾಗಿತ್ತು. ಶುಕ್ರವಾರ ಬೆಳಗ್ಗೆ ಮೆರವಣಿಗೆಯಲ್ಲಿ ತಂದು 11 ಗಂಟೆಯಿಂದ ಮಧ್ನಾಹ್ನ 1ಗಂಟೆವರೆಗೆ ತಾಪಂ ಕಚೇರಿ ಸಮೀಪ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಈ ಸಂದರ್ಭದಲ್ಲಿ ತಹಶೀಲ್ದಾರ್ ಮುಹಮದ್ ಅಸ್ಲಂ, ವೃತ್ತ ನಿರೀಕ್ಷಕ ನಯಾಝ್ ಬೇಗ್ ಪಾರ್ಥಿವ ಶರೀರಕ್ಕೆ ಪುಷ್ಪಮಾಲೆ ಹಾಕಿ ಸರಕಾರ ಪರವಾಗಿ ಗೌರವ ಸಲ್ಲಿಸಿದರು.
ಮಾಜಿ ಶಾಸಕ ಎನ್.ಸಂಪಂಗಿ, ಪುರಸಭೆ ಅಧ್ಯಕ್ಷೆ ಮಮತ ನಾಗರಾಜರೆಡ್ಡಿ, ಮುಖ್ಯಾಧಿಕಾರಿ ವಿ.ಪಂಕಜಾರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ನರೇಂದ್ರ, ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ಹನುಮಂತರೆಡ್ಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ವೆಂಕಟರವಣಪ್ಪ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎ.ಜಿ.ಸುಧಾಕರ್ ಹಾಗೂ ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ನಿವೃತ್ತ ಯೋಧರು, ಸಾರ್ವಜನಿಕರು ಅಂತಿಮ ದರ್ಶನ ಪಡೆದರು.