ಹೆಲ್ತ್ಕೇರ್ ಪ್ರೊಫೆಷನಲ್ ಮಸೂದೆ ಚಳಿಗಾಲದ ಅಧಿವೇಶನದಲ್ಲಿ ಅಂಗೀಕಾರ: ಕೇಂದ್ರ ಸಚಿವ ಸದಾನಂದಗೌಡ
ಬೆಂಗಳೂರು, ಡಿ.8: ‘ಹೆಲ್ತ್ಕೇರ್ ಪ್ರೊಪೆಷನಲ್ ಮಸೂದೆ-2018’ ಚಳಿಗಾಲದ ಅಧಿವೇಶನದಲ್ಲಿ ರಾಜ್ಯಸಭೆಯಲ್ಲಿ ಅಂಗೀಕಾರವಾಗುವ ನಿರೀಕ್ಷೆಯಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಭರವಸೆ ನೀಡಿದ್ದಾರೆ.
ನಗರದ ನಿಮ್ಹಾನ್ಸ್ ಕನ್ವೆನ್ಷನ್ ಸಭಾಂಗಣದಲ್ಲಿ ಸೊಸೈಟಿ ಆಫ್ ಇಂಡಿಯನ್ ರೇಡಿಯೋಗ್ರಾರ್ಸ್, ರಾಜ್ಯ ಮೆಡಿಕಲ್ ರೇಡಿಯಾಲಜಿಕಲ್ ಟೆಕ್ನಾಲಜಿಸ್ಟ್ ಮತ್ತು ರಾಜ್ಯ ಖಾಸಗಿ ರೇಡಿಯಾಲಜಿಕಲ್ ಟೆಕ್ನಾಲಜಿಸ್ಟ್’ ಸಂಘಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ರೇಡಿಯಾಲಜಿ ಸಂಬಂಧ 20ನೇ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರೇಡಿಯಾಲಜಿಸ್ಟ್ಗಳು ಸೇರಿದಂತೆ ಆರೋಗ್ಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ತಂತ್ರಜ್ಞರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಹೆಲ್ತ್ಕೇರ್ ಪ್ರೊೆಷನಲ್ ಮಸೂದೆಯ ಜಾರಿಗೆ ಕೇಂದ್ರ ಸರಕಾರ ಬದ್ಧವಿದೆ. ಈ ನಿಟ್ಟಿನಲ್ಲಿ ಈ ವರದಿ ಸಂಬಂಧ ಲೋಕಸಭೆಯಲ್ಲಿ ಸುದೀರ್ಘವಾದ ಚರ್ಚೆ ನಡೆದು ಅಂಗೀಕಾರವಾಗಿದೆ. ಅದನ್ನು ರಾಜ್ಯಸಭೆಗೆ ಕಳುಹಿಸಿದ್ದು, ಅದು ಈ ಅಧಿವೇಶನದಲ್ಲಿ ಅಂಗೀಕಾರವಾಗುವ ನಿರೀಕ್ಷೆಯಿದೆ ಎಂದು ಹೇಳಿದರು.
ದೇಶದಲ್ಲಿ ಕಳೆದ ಮೂರು ದಶಕಗಳಿಂದ ರೇಡಿಯಾಲಜಿ ತಂತ್ರಜ್ಞಾನದಲ್ಲಿ ವಿಭಿನ್ನವಾದ ಆವಿಷ್ಕಾರಗಳು ನಡೆಯುತ್ತಿವೆ. ಎಕ್ಸ್-ರೇನಿಂದ ಪ್ರಾರಂಭವಾಗಿ ಸಿಟಿ ಸ್ಕ್ಯಾನ್, ಎಂಆರ್ಐ ಸ್ಕ್ಯಾನ್, ಪೆಟ್ ಸ್ಕ್ಯಾನ್ ಸೇರಿದಂತೆ ಹಲವು ತಂತ್ರಜ್ಞಾನಗಳಿಂದ ವ್ಯಕ್ತಿಯ ದೇಹದಲ್ಲಿರುವ ಕಾಯಿಲೆಯನ್ನು ನಿಖರವಾಗಿ ಗುರುತಿಸುವ ತಂತ್ರಜ್ಞಾನಗಳು ಆವಿಷ್ಕಾರಗೊಂಡಿವೆ. ಹೀಗಾಗಿ, ಮುಂಬರುವ ದಿನಗಳಲ್ಲಿ ರೇಡಿಯೋಗ್ರಾರ್ಗಳ ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಮಣಿಪಾಲ್ ಆಸ್ಪತ್ರೆಯ ಮುಖ್ಯಸ್ಥ ಡಾ.ಸುದರ್ಶನ್ ಬಲ್ಲಾಳ್ ಮಾತನಾಡಿ, ನನಗೆ ಆರಂಭದ ದಿನಗಳಲ್ಲಿ ರೇಡಿಯೋಗ್ರಫಿ ಎಂದರೆ ಭಯ ಪಡುತ್ತಿದೆ. ರೇಡಿಯೋಗ್ರಫಿ ಮಾಡುವಾಗ ಬೆಳಕಿನ ಕಿರಣಗಳು ಸುಡಬಹುದು ಎಂಬ ಭಾವನೆ ಇತ್ತು. ಪ್ರಸ್ತುತ ಸಂದರ್ಭದಲ್ಲಿ ರೇಡಿಯಾಲಜಿ ಇಲ್ಲದೆ ಯಾವುದೇ ಕಾಯಿಲೆಗಳಿಗೂ ಚಿಕಿತ್ಸೆ ನೀಡಲು ಸಾಧ್ಯವಿಲ್ಲ ಎಂಬಂತಹ ಪರಿಸ್ಥಿತಿಯಿದೆ. ಭಾರತದಲ್ಲಿ ರೇಡಿಯಾಲಜಿಯ ಯಾವುದೇ ಉಪಕರಣಗಳನ್ನು ದೇಶೀಯವಾಗಿ ತಯಾರಿಸಲಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಿಮ್ಹಾನ್ಸ್ನ ನಿರ್ದೇಶಕ ಡಾ.ಗಂಗಾಧರ್ ಮಾತನಾಡಿ, ದೇಶದಲ್ಲಿ ರೇಡಿಯಾಲಜಿ ವ್ಯವಹಾರ ವಿಸ್ತಾರಗೊಂಡಿದೆ. ರೇಡಿಯಾಲಜಿ ಯಂತ್ರಗಳು ತುಂಬಾ ಸಂಕೀರ್ಣವಾಗಿದ್ದು, ರೋಗಿಗಳಿಗೆ ಯಾವುದೇ ಅಡ್ಡಪರಿಣಾಮಗಳಾಗದಂತೆ ಚಿಕಿತ್ಸೆ ನೀಡುವುದು ಸವಾಲಿನ ಕೆಲಸವಾಗಿದೆ. ಕಳೆದ ಐದು ವರ್ಷಗಳಿಂದ ನಮ್ಮ ಸಂಸ್ಥೆಯಲ್ಲಿ ಖರೀದಿಸಿರುವ ಉಪಕರಣಗಳಲ್ಲಿ ಶೇ.20ರಷ್ಟು ರೇಡಿಯಾಲಜಿಗೆ ಸಂಬಂಧಪಟ್ಟವುಗಳಾಗಿವೆ ಎಂದು ವಿವರಿಸಿದರು.
ಸಮಾರಂಭದಲ್ಲಿ ಶಾಸಕ ರಾಮಲಿಂಗಾರೆಡ್ಡಿ, ಸೊಸೈಟಿ ಆಫ್ ಇಂಡಿಯನ್ ರೇಡಿಯೋಗ್ರಾರ್ಸ್ ಅಧ್ಯಕ್ಷ ತ್ರಿಲೋಕಿನಾಥ್ ಮಿಶ್ರ, ತಜ್ಞ ವೈದ್ಯರಾದ ಪ್ರೊ.ಬಿ.ವೈ.ಕೆ.ಆರ್ಯ, ಡಾ.ಅರುಣ್ಕುಮಾರ್ ಗುಪ್ತ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.