ಬೆಂಗಳೂರು ಗೂಡ್ಸ್ ವಾಹನ ಕಳ್ಳತನ ಪ್ರಕರಣ: ಮಡಿಕೇರಿಯ ಮೂವರ ಬಂಧನ
ಮಡಿಕೇರಿ ಡಿ.9: ಬೆಂಗಳೂರಿನ ಮಾದಾವರದಿಂದ ಐಷರ್ ಗೂಡ್ಸ್ ವಾಹನದ ಕಳವು ಪ್ರಕರಣದಲ್ಲಿ ಮಡಿಕೇರಿ ಮೂಲದ ಮೂವರು ಆರೋಪಿಗಳನ್ನು ಹುಣಸೂರು ಪೊಲೀಸರು ಬಂಧಿಸಿದ್ದಾರೆ. ರವಿ ಕಾವೇರಪ್ಪ, ಕುಮಾರ ಮತ್ತು ಪ್ರದೀಪ್ ಎಂಬವರು ಬಂಧಿತ ಆರೋಪಿಗಳಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಬೆಂಗಳೂರು ಮಾದಾವರದ ಮನೆಯೊಂದರ ಮುಂದೆ ನಿಲ್ಲಿಸಿದ್ದ 12 ಲಕ್ಷ ರೂ.ಮೌಲ್ಯದ ಐಷರ್ ಗೂಡ್ಸ್ ವಾಹನ(ಕೆ.ಎ.51-ಎ.ಸಿ.5942)ಅನ್ನು ಕಳವು ಮಾಡಿದ ಆರೋಪಿಗಳು ಅದನ್ನು ಮಡಿಕೇರಿಯಲ್ಲಿ ಮಾರಾಟ ಮಾಡಲು ತರುತ್ತಿದ್ದರು ಎನ್ನಲಾಗಿದೆ. ಹುಣಸೂರು ಪೊಲೀಸರು ಇದೇ ಮಾರ್ಗದಲ್ಲಿ ಬಂದ ಐಷರ್ ವಾಹನವನ್ನು ತಪಾಸಣೆ ನಡೆಸಲು ಮುಂದಾದಾಗ ವಾಹನಲ್ಲಿದ್ದ ರವಿ ಕಾವೇರಪ್ಪ ಎಂಬಾತ ಓಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಇದರಿಂದ ಸಂಶಯಗೊಂಡ ಪೊಲೀಸರು ಆತನನ್ನು ಬೆನ್ನಟ್ಟಿ ಹಿಡಿದಿದ್ದಾರೆ. ವಾಹನದಲ್ಲಿ ಇತರ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ವಾಹನ ಕಳವು ಮಾಡಿರುವುದು ಪತ್ತೆಯಾಗಿದೆ.
ಬಂಧಿತ ಆರೋಪಿಗಳ ಪೈಕಿ ರವಿ ಕಾವೇರಪ್ಪ ರಿಮ್ಯಾಂಡ್ ಹೋಂ ಹಿಂಬದಿ ನಿವಾಸಿಯಾಗಿದ್ದು, ಪ್ರದೀಪ್ ರಾಣಿಪೇಟೆ ಹಾಗೂ ಕುಮಾರ್ ಕನ್ನಂಡಬಾಣೆ ನಿವಾಸಿಯಾಗಿದ್ದಾರೆಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.