ಚಿಕ್ಕಮಗಳೂರು: ಟ್ರ್ಯಾಕ್ಟರ್-ಬೈಕ್ ಮುಖಾಮುಖಿ ಢಿಕ್ಕಿ; ಶಾಲಾ ಬಾಲಕ ಮೃತ್ಯು
ಚಿಕ್ಕಮಗಳೂರು, ಡಿ.10: ಅತೀ ವೇಗವಾಗಿ ಬರುತ್ತಿದ್ದ ಟ್ರ್ಯಾಕ್ಟರ್ ಒಂದು ಎದುರಿನಿಂದ ಬರುತ್ತಿದ್ದ ಬೈಕ್ ಮೇಲೆ ಹರಿದ ಪರಿಣಾಮ ಬೈಕ್ನಲ್ಲಿದ್ದ ಶಾಲಾ ಬಾಲಕನೋರ್ವ ಸ್ಥಳದಲ್ಲೇ ಮೃತಪಟ್ಟು, ಬಾಲಕನ ತಂದೆ ತೀವ್ರವಾಗಿ ಗಾಯಗೊಂಡಿರುವ ಘಟನೆ ಸೋಮವಾರ ಸಂಜೆ ಸಂಘಮೇಶ್ವರ ಪೇಟೆ ಗ್ರಾಮದಲ್ಲಿ ನಡೆದಿದೆ.
ಮೃತ ಶಾಲಾ ಬಾಲಕನನ್ನು ಹಕೀದ್(7) ಎಂದು ಗುರುತಿಸಲಾಗಿದ್ದು, ಬಾಲಕನ ತಂದೆ ಸಲೀಂ ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಿಲ್ಲೆಯ ಎನ್.ಆರ್.ಪುರ ತಾಲೂಕಿ ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಸಂಘಮೇಶ್ವರ ಪೇಟೆ ಗ್ರಾಮದ ಪೂರ್ಣಪ್ರಜ್ಞಾ ಶಾಲೆಯಲ್ಲಿ 2ನೇ ತರಗತಿ ಓದುತ್ತಿದ್ದ ಹಕೀದ್ನನ್ನು ಸಂಜೆ ಶಾಲೆ ಮುಗಿದ ಬಳಿಕ ಮನೆಗೆ ಕರೆ ತರಲು ತಂದೆ ಸಲೀಂ ತೆರಳಿದ್ದರು. ಶಾಲೆಯಿಂದ ಬೈಕ್ನಲ್ಲಿ ತಂದೆ ಮಗ ಬೈಕ್ನಲ್ಲಿ ಬರುತ್ತಿದ್ದ ವೇಳೆ ಎದುರಿನಿಂದ ಅತೀ ವೇಗದಲ್ಲಿ ಬಂದ ಟ್ರ್ಯಾಕ್ಟರ್ ಸಲೀಂ ಅವರ ಮನೆ ಮುಂದೆಯೇ ಬೈಕ್ಗೆ ಢಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ. ಟ್ರ್ಯಾಕ್ಟರ್ ಚಾಲಕ ಪರಾರಿಯಾಗಿದ್ದಾನೆಂದು ತಿಳಿದು ಬಂದಿದ್ದು, ಘಟನೆ ಸಂಬಂಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.