ಮಂಡ್ಯ: ಕಲ್ಲುಗಣಿಗಾರಿಕೆ ಸ್ಥಳಕ್ಕೆ ಮಾಜಿ ಶಾಸಕ ಚಂದ್ರಶೇಖರ್ ಭೇಟಿ; ಕಾಂಗ್ರೆಸ್-ಜೆಡಿಎಸ್ ಬೆಂಬಲಿಗರ ನಡುವೆ ವಾಗ್ವಾದ
ಮಂಡ್ಯ,ಡಿ.14: ಕಲ್ಲುಗಣಿಗಾರಿಕೆ ಸ್ಥಳಕ್ಕೆ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಭೇಟಿ ನೀಡಿದ್ದಾಗ, ಚಂದ್ರಶೇಖರ್ ಮತ್ತು ಕೋರೆ ಮಾಲಕ ಜಿಪಂ ಸದಸ್ಯ ಎಚ್.ಟಿ.ಮಂಜು ಬೆಂಬಲಿಗರ ನಡುವೆ ಮಾತಿನ ಚಕಮಕಿ, ತಳ್ಳಾಟ ನಡೆದ ಘಟನೆ ಕೆ.ಆರ್.ಪೇಟೆ ತಾಲೂಕಿನ ಬೊಮ್ಮನಾಯಕನಹಳ್ಳಿ ಬಳಿ ಶುಕ್ರವಾರ ನಡೆದಿದೆ.
ಅರಣ್ಯ ಪ್ರದೇಶದಲ್ಲಿ ಕಲ್ಲು ಕೋರೆ ನಡೆಯುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಅರಣ್ಯಾಧಿಕಾರಿಗಳಾದ ಶ್ರೀಕಾಂತ್ ಮತ್ತು ರಾಘವೇಂದ್ರ, ಮನ್ಮುಲ್ ನಿರ್ದೇಶಕ ಶೀಳನೆರೆ ಅಂಬರೀಶ್, ಡಾಲು ರವಿ, ಮಾಜಿ ಶಾಸಕರ ಪುತ್ರ ಶ್ರೀಕಾಂತ್, ಸ್ಥಳೀಯರು ಕಾಂಗ್ರೆಸ್ ಹಲವು ಕಾರ್ಯಕರ್ತರು ಕಲ್ಲು ಕೋರೆಗೆ ಮೇಲುಗಡೆ ಇರುವ ಅರಣ್ಯ ಪ್ರದೇಶಕ್ಕೆ ತೆರಳಿ ವೀಕ್ಷಣೆ ಮಾಡಿದ್ದಾರೆ.
ಮಾಜಿ ಶಾಸಕರು ಮತ್ತು ಬೆಂಬಲಿ ಕೋರೆ ಮೂಲಕ ಕೆಳಗಿಳಿದು ಬರುವಾಗ ಕೋರೆ ಮಾಲಕ ಜಿಪಂ ಸದಸ್ಯ ಎಚ್.ಟಿ.ಮಂಜು ಬೆಂಬಲಿಗರು ವಿಷಯ ತಿಳಿದು ಕೋರೆ ಬಳಿ ಬಂದು ಮಾಜಿ ಶಾಸಕ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರನ್ನು ಅಡ್ಡಗಟ್ಟಿ ಕಲ್ಲು ಕೋರೆಗೆ ಅಕ್ರಮವಾಗಿ ಏಕೆ ಬಂದಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಈ ಸಂದರ್ಭದಲ್ಲಿ ಮಾತಿನ ಚಕಾಮಕಿ ನಡೆದು ಮಾಜಿ ಶಾಸಕರನ್ನು ತಳ್ಳಾಡುವ ಮಟ್ಟಕ್ಕೆ ಪರಿಸ್ಥಿತಿ ನಿರ್ಮಾಣವಾಯಿತು. ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಜೋರು ವಾಗ್ವಾದಗಳು ನಡೆದು ಸ್ವಲ್ಪ ಸಮಯ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಯಿತು.
ಆ ವೇಳೆಗೆ ಸ್ಥಳಕ್ಕೆ ಜಿಪಂ ಸದಸ್ಯ ಎಚ್.ಟಿ.ಮಂಜು ಆಗಮಿಸಿದರು. ಗೊಂದಲದಿಂದ ಕುಪಿತಗೊಂಡ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಗಲಾಟೆ ಮಾಡುವುದಾದರೇ ಹೇಳಿ ಇಲ್ಲೇ ಬಾವುಟ ಕಟ್ಟಿ ಕುಸ್ತಿ ಮಾಡೋಣ ಎಂದು ಹೇಳಿದಾಗ, ಎಚ್.ಟಿ.ಮಂಜು ನಾವೇಕೆ ಕುಸ್ತಿ ಮಾಡೋಣ. ಕುಸ್ತಿ ಮಾಡೋಕೆ ಬಂದಿಲ್ಲ. ನಾವು ಕಾನೂನಿನ ಪ್ರಕಾರ ಕಲ್ಲುಗಣಿಗಾರಿಕೆ ಮಾಡುತ್ತಿದ್ದೇವೆ. ಅಕ್ರಮವಾಗಿದ್ದರೆ ಅಧಿಕಾರಿಗಳ ಮುಖಾಂತರ ನಿಲ್ಲಿಸಿ, ರಾಜಕೀಯ ದ್ವೇಷದಿಂದ ಈ ತರಹ ನಡೆದುಕೊಳ್ಳುವುದು ಸರಿಯಲ್ಲ ಎಂದು ಎದುರುತ್ತರಿಸಿದರು.
ಎರಡು ಕಡೆಯವರ ನಡುವೆ ಮಾತಿನ ಚಕಮುಕಿ ನಡೆಯುತ್ತಿರುವಾಗಲೇ ಜಿಪಂ ಸದಸ್ಯ ಎಚ್.ಟಿ.ಮಂಜು ಅವರ ಸಹೋದರ ಟಿಎಪಿಸಿಎಂಎಸ್ ಲೋಕೇಶ್ ಅವರು ಬೆಂಬಲಿಗರನ್ನು ಸಮಾಧಾನಪಡಿಸಿ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಅವರನ್ನು ಕಾರಿನಲ್ಲಿ ಕಳಿಸಿಕೊಟ್ಟರು. ಮಾಜಿ ಶಾಸಕರ ತಂಡ ಬೊಮ್ಮನಾಯಕನಹಳ್ಳಿ ಗ್ರಾಮಕ್ಕೆ ತೆರಳಿ ಘಟನೆ ಸಂಬಂಧ ಮುಖಂಡರೊಂದಿಗೆ ಚರ್ಚಿಸಿ ಸುತ್ತಮುತ್ತಲಿನ ಗ್ರಾಮಕ್ಕೆ ಭೇಟಿ ನೀಡಿ ಹಿಂದಿರುಗಿದರು.
ಅರಣ್ಯ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಹೀಗಿದ್ದರೂ ಅರಣ್ಯ ಇಲಾಖೆ ಅನುಮತಿ ಕೊಟ್ಟಿದೆ. ಸ್ಥಳೀಯರು ದೂರು ನೀಡಿದ್ದರು. ಅದಕ್ಕಾಗಿ ಸ್ಥಳಕ್ಕೆ ತೆರಳಿದ್ದೆ. ಈ ಸಂಬಂಧ ಸರಕಾರ ಮತ್ತು ಅರಣ್ಯ ಇಲಾಖೆಯ ಗಮನಕ್ಕೆ ತರುತ್ತೇನೆ. ಅಕ್ರಮ ಗಣಿಗಾರಿಕೆ ಸಂಬಂಧ ಕಾನೂನು ಹೋರಾಟ ನಡೆಸುತ್ತೇನೆ.
-ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್.
ಮಾಜಿ ಶಾಸಕರು ಕೋರೆಗೆ ಅತಿಕ್ರಮ ಪ್ರವೇಶ ಮಾಡಿರೋದು ಸರಿಯಲ್ಲ. ಅಕ್ರಮ ಕೋರೆಯಿದ್ದರೆ ಸಂಬಂಧಪಟ್ಟ ಇಲಾಖೆಯ ಮೂಲಕ ಅಧಿಕಾರಿಗಳ ಮಟ್ಟದಲ್ಲಿ ತನಿಖೆ ನಡೆಸಿ ಕೋರೆಯನ್ನು ನಿಲ್ಲಿಸಲಿ. ರಾಜಕೀಯಕ್ಕಾಗಿ ವೈಯಕ್ತಿಕ ದ್ವೇಷದಿಂದ ತೊಂದರೆ ನೀಡುವುದು ಸರಿಯಿಲ್ಲ. ಸರಕಾರದ ಎಲ್ಲಾ ನಿಯಮಗಳ ಪ್ರಕಾರ ಅನುಮತಿ ಪಡೆದು ಕೋರೆ ನಡೆಸುತ್ತಿದ್ದೇನೆ.
- ಕೋರೆ ಮಾಲಕ ಜಿಪಂ ಸದಸ್ಯ ಎಚ್.ಟಿ.ಮಂಜು