ಹನೂರು ದೇವಸ್ಥಾನದಲ್ಲಿ ವಿಷ ಪ್ರಸಾದ ಪ್ರಕರಣ: ಮೃತರ ಸಂಖ್ಯೆ 14ಕ್ಕೆ ಏರಿಕೆ
ಹನೂರು, ಡಿ. 16: ಹನೂರು ತಾಲ್ಲೂಕಿನ ಸೂಳ್ವಾಡಿ ಗ್ರಾಮದ ಕಿಚ್ಚುಗುತ್ತಿ ಮಾರಮ್ಮನ ದೇವಸ್ಥಾನದಲ್ಲಿ ಶುಕ್ರವಾರ ಪ್ರಸಾದ ಸೇವಿಸಿ 11 ಜನ ಮೃತಪಟ್ಟಿದ್ದು, ತೀವ್ರ ಅಸ್ವಸ್ಥರಾಗಿ ಚಿಕಿತ್ಸೆ ಪಡೆಯುತಿದ್ದವರಲ್ಲಿ ಮೂವರು ರವಿವಾರ ಮೃತಪಟ್ಟಿದ್ದು, ಮೃತರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ.
ಕೌದಳ್ಳಿ ಸಮೀಪದ ಎಂಜಿ ದೂಡ್ಡಿ ಗ್ರಾಮದ ನಿವಾಸಿ ಮಗೇಶ್ವರಿ (40), ಬಿದರಹಳ್ಳಿ ಗ್ರಾಮದ ನಿವಾಸಿ ಸಾಲಮ್ಮ (34 ) ಹಾಗೂ ಒಡ್ಡರದೂಡ್ಡಿ ಸಮೀಪದ ದೋರೈಸ್ವಾಮಿಮೇಡು ಗ್ರಾಮದ ಮನ್ನ ಬಿನ್ ವೀರ (30) ಮೃತರು ಎಂದು ಗುರುತಿಸಲಾಗಿದೆ.
ಮಗೇಶ್ವರಿ 9, 8 ಮತ್ತು 6ನೆ ತರಗತಿಯಲ್ಲಿ ಕಲಿಯುತ್ತಿರುವ ಮೂವರು ಮಕ್ಕಳನ್ನು ಅಗಲಿದ್ದಾರೆ. ತಾಯಿಯನ್ನು ಕಳೆದುಕೂಂಡು ಈ ಮಕ್ಕಳ ಆಕ್ರಂದನ ಹಾಗೂ ಸಂಬಂಧಿಕರು, ಕುಟಂಬಸ್ಥರ ಆಕ್ರಂದನ ಮುಗಿಲು ಮಟ್ಟಿದ್ದು ಎಮ್ ಜಿ ದೂಡ್ಡಿದಲ್ಲಿ ನಿರವ ಮೌನ ಆವರಿಸಿದೆ.
ಶನಿವಾರ ಸಾಮೂಹಿಕ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ಸಣ್ಣ ನೀರಾವರಿ ಸಚಿವ ಸಿ ಎನ್ ಪುಟ್ಟರಾಜು ಕೂಳ್ಳೇಗಾಲ ಶಾಸಕ ಎನ್ ಮಹೇಶ್ ಹನೂರು ಜೆಡಿಎಸ್ ಮುಖಂಡ ಎಮ್ಆರ್ ಮಂಜುನಾಥ್ ಮೃತ ಕುಟುಂಬಕ್ಕೆ ಸಾಂತ್ವಾನ ಹೇಳಿ, 10 ಸಾವಿರ ರೂ. ವೈಯಕ್ತಿಕ ಪರಿಹಾದ ಧನ ನೀಡಿದ್ದರು.
ಮತ್ತಿಬ್ಬರನ್ನು ವಶಕ್ಕೆ ಪಡೆದ ಪೊಲೀಸರು
ಈ ಘಟನೆ ಸಂಬಂಧ ಹನೂರು ಸಮೀಪದ ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳ ಪತ್ತೆಗಾಗಿ ಈಗಾಗಲೇ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನೇತೃತ್ವದಲ್ಲಿ ಹಲವು ತಂಡಗಳನ್ನ ರಚಿಸಿ ತನಿಖೆ ಕೈಗೂಂಡು ಶುಕ್ರವಾರ ದೇವಸ್ಥಾನಕ್ಕೆ ಸಂಬಂಧಿಸಿದ ಮೇಲ್ವಿಚಾರಕರಾದ ಚಿನ್ನಪ್ಪಿ ಮತ್ತು ಮಾದೇವ ಎಂಬವರನ್ನು ವಶಕ್ಕೆ ಪಡೆದಿದ್ದಾರೆ ಅಲ್ಲದೆ ಈ ಘಟನೆ ಸಂಬಂಧ ವಿಚಾರಣೆಯನ್ನು ಚುರುಕುಗೂಳಿಸಿ ದುಷ್ಕರ್ಮಿಗಳನ್ನು ಪತ್ತೆ ಮಾಡಲು ಇನ್ನೂ ಇಬ್ಬರನ್ನು ಸಹ ವಶಕ್ಕೆ ಪಡೆದು ಗೌಪ್ಯವಾಗಿ ವಿಚಾರಣೆ ಮಾಡಲಾಗುತ್ತಿದೆ ಎಂದು ಮೂಲಗಳಿಂದ ಮಾಹಿತಿ ಬಂದಿದೆ.